ನನ್ನ ಹತ್ಯೆಯಾದ್ರೆ ಜರ್ದಾರಿ ವಿರುದ್ಧ ಕೇಸ್ ಹಾಕಿ!: ಮಾಜಿ ಸಿಎಂ
ಇಸ್ಲಾಮಾಬಾದ್, ಮಂಗಳವಾರ, 16 ನವೆಂಬರ್ 2010( 15:22 IST )
'ಒಂದು ವೇಳೆ ನನ್ನ ಹತ್ಯೆಯಾದ್ರೆ...ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಸಿಂಧ್ ಪ್ರಾಂತ್ಯದ ಅವರ ಕೆಲವು ನಿಕಟವರ್ತಿಗಳ ವಿರುದ್ಧವೇ ಮೊಕದ್ದಮೆ ದಾಖಲಿಸಿ ಎಂದು ಪಾಕಿಸ್ತಾನ ಸಿಂಧ್ಯ ಪ್ರಾಂತ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ತಿಳಿಸಿದ್ದಾರೆ.
ತನ್ನ ಕೊಲೆ ನಡೆದಲ್ಲಿ ಅಸಿಫ್ ಅಲಿ ಜರ್ದಾರಿ ಸೇರಿದಂತೆ ಸಿಂಧ್ನ ಹಾಲಿ ಮುಖ್ಯಮಂತ್ರಿ ಖ್ವಾಮಿ ಅಲಿ ಶಾ, ಗೃಹ ಸಚಿವ ಜುಲ್ಫಿಕರ್ ಮಿರ್ಜಾ, ಸರ್ದಾರ್ ಚಾಂಡಿಯೋ ಮತ್ತು ಬುರ್ಹಾನ್ ಚಾಂಡಿಯೋ ವಿರುದ್ಧವೇ ದೂರು ದಾಖಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಲಿಯಾಖತ್ ಅಲಿ ಜಾಟೋಯ್ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.
ಈ ಎಲ್ಲಾ ವ್ಯಕ್ತಿಗಳಿಂದ ತನ್ನ ಜೀವಕ್ಕೆ ಅಪಾಯ ಇರುವುದಾಗಿ ಅವಾಮಿ ಇಟ್ಟೆಹಾದ್ ಪಕ್ಷದ ವರಿಷ್ಠರಾಗಿರುವ ಅಲಿ ಗಂಭೀರವಾಗಿ ಆರೋಪಿಸಿದ್ದಾರೆ. ಭಾನುವಾರ ಲಾರ್ಕಾನಾ ಪ್ರದೇಶದಲ್ಲಿ ಸಭೆಯನ್ನು ನಡೆಸಲು ಉದ್ದೇಶಿಸಿದ್ದು, ಆ ಸಂದರ್ಭದಲ್ಲಿ ನನ್ನ ಹತ್ಯೆಗೈಯುವ ಸಂಚು ನಡೆಸಲಾಗಿದೆ ಎಂದು ದೂರಿದರು.
ಲಾರ್ಕಾನಾ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಪ್ರಾಬಲ್ಯವುಳ್ಳ ಸ್ಥಳವಾಗಿದೆ. ಅಲ್ಲದೇ ಜರ್ದಾರಿಯ ಪ್ರಭಾವ ಹೊಂದಿರುವ ಪ್ರದೇಶವೂ ಆಗಿದೆ. ಆ ನಿಟ್ಟಿನಲ್ಲಿ ಸಭೆಯ ಸಂದರ್ಭ ತನ್ನ ಹತ್ಯೆ ನಡೆದರೆ ಅದಕ್ಕೆ ಜರ್ದಾರಿ ಸೇರಿದಂತೆ ಅವರ ನಿಕಟವರ್ತಿಗಳೇ ಕಾರಣಿಭೂತರು ಎಂದು ತಿಳಿಸಿದ್ದಾರೆ.