ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ಸಲ್ಮಾನ್ ತಾಸೀರ್ ಹತ್ಯೆ ದೊಡ್ಡ ಆಘಾತಕಾರಿ ಘಟನೆ ಎಂದು ಅಂತಾರಾಷ್ಟ್ರೀಯ ಸಮುದಾಯ ತಿಳಿಸಿದ್ದು, ಗವರ್ನರ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿದೆ.
ಪಂಜಾಬ್ ಪ್ರಾಂತ್ಯದ ಗವರ್ನರ್ ಅವರನ್ನು ಹತ್ಯೆಗೈಯುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ತಿಳಿಸಿದ್ದಾರೆ. ಈ ಹತ್ಯೆಯನ್ನು ವಿಶ್ವಸಂಸ್ಥೆ ಬಲವಾಗಿ ಖಂಡಿಸುವುದಾಗಿ ಹೇಳಿದರು.
ಗವರ್ನರ್ ಸಲ್ಮಾನ್ ತಾಸೀರ್ ಅವರು ಸುಧಾರಣಾವಾದಿ ಮುಖಂಡರಾಗಿದ್ದರು. ಅವರು ಪಾಕಿಸ್ತಾನದಲ್ಲಿನ ಧಾರ್ಮಿಕ ನಿಂದನೆ ಕಾಯ್ದೆಯನ್ನು ತಿದ್ದುಪಡಿ ಮಾಡುವ ಬಗ್ಗೆ ಒಲವು ತೋರಿದ್ದೆ ದೊಡ್ಡ ಅಪರಾಧ ಎಂದು ಪರಿಗಣಿಸಿ ಅವರನ್ನು ಹತ್ಯೆಗೈದಿರುವುದು ಘೋರ ದುರಂತ ಎಂದು ಮೂನ್ ತಿಳಿಸಿದ್ದಾರೆ.
ಸಲ್ಮಾನ್ ತಾಸೀರ್ ಅವರನ್ನು ಇಸ್ಲಾಮಾಬಾದ್ನಲ್ಲಿನ ಮಾರ್ಕೆಟ್ ಪ್ರದೇಶದ ರೆಸ್ಟೋರೆಂಟ್ ಸಮೀಪ ಕಾರಿನಲ್ಲಿ ಕುಳಿತಿದ್ದಾಗ ಅವರ ಅಂಗರಕ್ಷಕ ಮಲಿಕ್ ಗುಂಡಿಕ್ಕಿ ಹತ್ಯೆಗೈದಿದ್ದ. ಈ ಘಟನೆಗೆ ವಿಶ್ವದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.