ಪಾಕಿಸ್ತಾನಿ ಪ್ರಜೆಯೊಬ್ಬನ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಲ್ಲಿರುವ ಭಾರತೀಯ ಹೊಟೇಲ್ ಮಾಲೀಕ ಮೃತನ ಕುಟುಂಬಕ್ಕೆ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಎಂಟು ಭಾರತೀಯರ ಗಲ್ಲುಶಿಕ್ಷೆಯನ್ನು ಶಾರ್ಜಾ ಕೋರ್ಟ್ ಮಾಫಿ ಮಾಡಿದೆ.
2009 ಜುಲೈ 11ರಂದು ಹತ್ತು ಮಂದಿ ಸೇರಿಕೊಂಡು ಪಾಕ್ ಪ್ರಜೆಯೊಬ್ಬನನ್ನು ಹತ್ಯೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮೂಲದ ಎಂಟು ಹಾಗೂ ಇಬ್ಬರು ಪಾಕಿಸ್ತಾನಿಯರನ್ನು ಪೊಲೀಸರು ಸೆರೆ ಹಿಡಿದಿದ್ದರು.
ಹತ್ಯಾ ಪ್ರಕರಣದ ವಿಚಾರಣೆ ನಡೆಸಿದ ಶಾರ್ಜಾ ಕೋರ್ಟ್ ಎಂಟು ಭಾರತೀಯರು ಸೇರಿದಂತೆ ಹತ್ತು ಮಂದಿಗೂ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಏತನ್ಮಧ್ಯೆ ಹೋಟೆಲ್ ಮಾಲೀಕ ಎಸ್.ಪಿ.ಸಿಂಗ್ ಓಬೇರಾಯ್ ಅವರು ಮೃತನ ಕುಟುಂಬಕ್ಕೆ ಪರಿಹಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾರ್ಜಾ ಕೋರ್ಟ್ ಇಬ್ಬರು ಪಾಕಿಸ್ತಾನಿ ಪ್ರಜೆ ಸೇರಿದಂತೆ ಹತ್ತು ಮಂದಿಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ರದ್ದುಪಡಿಸಿದೆ.
ಕೊಲೆ ಪ್ರಕರಣದ ಆರೋಪಿಗಳಾಗಿರುವ ಹತ್ತು ಮಂದಿಗೂ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಆದರೆ ಆರೋಪಿಗಳು ಈಗಾಗಲೇ 21 ತಿಂಗಳು ಜೈಲುಶಿಕ್ಷೆ ಅನುಭವಿಸಿದ್ದಾರೆ. ಹಾಗಾಗಿ ಅವರು ಇನ್ನು ಆರು ತಿಂಗಳ ನಂತರ ಬಂಧಮುಕ್ತಗೊಳ್ಳಲಿದ್ದಾರೆ. ನಂತರ ಅವರನ್ನು ಅವರ ದೇಶಕ್ಕೆ ಗಡಿಪಾರು ಮಾಡಲಿದ್ದಾರೆ ಎಂದು ಓಬೇರಾಯ್ ಅವರು ಕೋರ್ಟ್ ನೀಡಿರುವ ತೀರ್ಪಿನ್ನು ಉಲ್ಲೇಖಿಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಸ್ಲಾಮಾಬಾದ್ನ ಮುಮ್ತಾಜ್ ಯೂಸೂಫ್ ಅವರನ್ನು ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆಗೈದಿದ್ದರು. ಪ್ರಕರಣದ ಬಗ್ಗೆ ಯೂಸೂಫ್ ತಂದೆ ತಾವು ರಾಜಿ ಸಂಧಾನಕ್ಕೆ ಸಿದ್ದರಿರುವುದಾಗಿ 2009 ನವೆಂಬರ್ನಲ್ಲಿ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆ ನಿಟ್ಟಿನಲ್ಲಿ ಕೋರ್ಟ್ ಗಲ್ಲುಶಿಕ್ಷೆಯನ್ನು ಮಾಫಿ ಮಾಡಿದೆ.
ಪಂಜಾಬ್ನ ಕುಲ್ದೀಪ್ ಸಿಂಗ್, ಸಾಚಿನ್ ಕುಮಾರ್ ಶರ್ಮಾ, ರಾಕೇಶ್ ಕುಮಾರ್, ಸುಖ್ಪಾಲ್ ಸಿಂಗ್, ಹರ್ದೇವ್ ಸಿಂಗ್, ಚರಣ್ಜೀತ್, ಅಮರ್ಜೀತ್ ಸಿಂಗ್ ಮತ್ತು ರಶ್ವಿಂದರ್ ಪಾಲ್ ಹಾಗೂ ಪಾಕಿಸ್ತಾನದ ಮೊಹಮ್ಮದ್ ಅನ್ಸಾರ್ ಚೌಧರಿ ಮತ್ತು ಶಾಹಿದ್ ಹುಸೈನ್ ರಾಣಾ ನೇಣು ಕುಣಿಕೆಯಿಂದ ಬಚಾವ್ ಆಗಿದ್ದಾರೆ.