ಪಾಕಿಸ್ತಾನ ಮಿಲಿಟರಿ ಮತ್ತು ಐಎಸ್ಐನ ಹಾಲಿ ಮತ್ತು ಮಾಜಿ ಅಧಿಕಾರಿಗಳು ಯಾವ ರೀತಿಯಲ್ಲಿ ಲಷ್ಕರ್ ಎ ತೊಯ್ಬಾ, ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಗಳ ಜತೆ ಸಂಬಂಧ ಹೊಂದಿದ್ದಾರೆಂಬುದು ಷಿಕಾಗೋ ಕೋರ್ಟ್ನಲ್ಲಿ ತಹಾವೂರ್ ರಾಣಾನ ವಿಚಾರಣೆ ವೇಳೆ ಬಯಲಾಗಿದೆ ಎಂದು ಮಾಧ್ಯಮವೊಂದರ ವರದಿ ತಿಳಿಸಿದೆ.
ಪಾಕಿಸ್ತಾನದ ಐಎಸ್ಐನ ಮೇಜರ್ ಇಕ್ಬಾಲ್ ನಿರ್ದೇಶನದ ಮೇರೆಗೆ ಮುಂಬೈ ಭಯೋತ್ಪಾದನಾ ದಾಳಿಯ ಸಂಚು ರೂಪಿಸಲಾಗಿದೆ ಎಂದು ಹೆಡ್ಲಿ ಕೂಡ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಅಷ್ಟೇ ಅಲ್ಲ ರಾಣಾ ಕೂಡ ಇಕ್ಬಾಲ್ ಅವರನ್ನು ಸಂಪರ್ಕಿಸಿದ್ದ ಎಂದು ತನಿಖಾ ಪತ್ರಕರ್ತ ಸೆಬಾಸ್ಟೀಯನ್ ರೋಟೆಲ್ಲಾ ವಿವರಿಸಿರುವುದಾಗಿ ವೆಬ್ಸೈಟ್ ವರದಿ ಹೇಳಿದೆ.
2008ರಲ್ಲಿ ನಡೆದ ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಷಿಕಾಗೋ ಕೋರ್ಟ್ ರಾಣಾನನ್ನು ದೋಷಮುಕ್ತಗೊಳಿಸಿದೆ. ಆದರೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್ ಸಂಘಟನೆಗೆ ನೆರವು ಮತ್ತು ಡೆನ್ಮಾರ್ಕ್ ದಾಳಿ ಸಂಚು ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಈ ಆರೋಪದಲ್ಲಿ ಆತನಿಗೆ 30 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ.
ಹೆಡ್ಲಿ ಮತ್ತು ರಾಣಾ ಬಾಲ್ಯದ ಗೆಳೆಯರಾಗಿದ್ದರು. ಹಾಗಾಗಿ ಭಾರತದ ವಿರುದ್ಧ ಐಎಸ್ಐ ಜತೆ ಸೇರಿ ಕಾರ್ಯನಿರ್ವಹಿಸುವಂತೆ ಹೆಡ್ಲಿ ರಾಣಾನ ಮನವೊಲಿಸಿದ್ದ. ಅಲ್ಲದೇ ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿನ ಪ್ರಮುಖ ಸೂತ್ರಧಾರಿ ಐಎಸ್ಐ ಎಂಬುದು ಕೂಡ ವಿಚಾರಣೆಯಲ್ಲಿ ಬಹಿರಂಗವಾಗಿರುವುದಾಗಿ ರೋಟೆಲ್ಲಾ ಹೇಳಿದ್ದಾರೆ.