ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ಆಸ್ಟ್ರೇಲಿಯಾ ನಿರಾಕರಿಸಿರುವುದು ಭಾರತ ವಿರೋಧಿಯಲ್ಲ ಹಾಗೂ ಇದು ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಯಾವುದೇ ರೀತಿಯ ಅಡ್ಡಿಯುಂಟಾಗುವುದಿಲ್ಲ ಎಂದು ಭಾರತದಲ್ಲಿನ ಆಸ್ಟ್ರೇಲಿಯಾ ರಾಯಭಾರಿ ಪೀಟರ್ ವರ್ಗೀಸ್ ಸ್ಪಷ್ಟಪಡಿಸಿದ್ದಾರೆ.
'ಯುರೇನಿಯಂ ಮಾರಾಟ ಮಾಡದಿರುವ ನಮ್ಮ ರಾಷ್ಟ್ರದ ನೀತಿಯು ಭಾರತ ವಿರೋಧಿಯಲ್ಲ ಆದರೆ ಅಣ್ವಸ್ತ್ರ ನಿಶ್ಯಸ್ತ್ರೀಕರಣ ನೀತಿಯ ಪರವಾಗಿದೆ, ಹಾಗೂ ಯಾವುದೇ ಒಂದು ವಿಷಯವು ಒಟ್ಟಾರೆ ಇಡೀ ಬಾಂಧವ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಸರಕಾರ ಪರಿಶೀಲಿಸಲಿದೆ ಎಂದು ನನಗೆ ಅನ್ನಿಸುವುದಿಲ್ಲ' ಎಂದು ವರ್ಗೀಸ್ ತಿಳಿಸಿದ್ದಾರೆ.
ಈ ಹಿಂದೆ ಭಾರತಕ್ಕೆ ಆಸ್ಟ್ರೇಲಿಯಾ ಯುರೇನಿಯಂ ಮಾರಾಟ ಮಾಡದೇ ಇರಲು ನಿರ್ಧರಿಸಿದ್ದು ಹಾಗೂ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದಿದ್ದ ಹಿಂಸಾಚಾರ ಈ ಎರಡು ಮುಖ್ಯ ವಿಷಯಗಳು ಉಭಯ ದೇಶಗಳ ಬಾಂಧವ್ಯಕ್ಕೆ ತೊಡಕುಂಟು ಮಾಡಿದ್ದವು ಎಂದು ವರ್ಗೀಸ್ ಹೇಳಿದ್ದಾರೆ.
2009ರಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ನಡೆದ ಸಂದರ್ಭದಲ್ಲೇ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದ ವರ್ಗೀಸ್ , ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಅಗತ್ಯ ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣವು ಜನರ ನಡುವೆ ಬಾಂಧವ್ಯ ವೃದ್ಧಿಸಲು ಇದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.