ಟ್ರಿಪೋಲಿ, ಮಂಗಳವಾರ, 27 ಸೆಪ್ಟೆಂಬರ್ 2011( 16:29 IST )
ಲಿಬಿಯಾದ ಪದಚ್ಯುತ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರನ್ನು ಸೆರೆ ಹಿಡಿಯಲು ಪಣ ತೊಟ್ಟಿರುವ ಮಧ್ಯಂತರ ಸರಕಾರದ ಸೇನಾ ಪಡೆ ಅವರ ತವರೂರಾದ ಸಿರ್ಟೆಯಲ್ಲಿ ಹೋರಾಟ ಆರಂಭಿಸಿದ್ದು, ಭಯಭೀತರಾದ ನೂರಾರು ಜನರು ಊರು ತೊರೆದು ಓಡಿ ಹೋಗಿದ್ದಾರೆ.
ನೀರು ಮತ್ತು ಆಹಾರ ಸೌಲಭ್ಯವಿಲ್ಲದೇ ಇರುವುದರಿಂದ ಈ ನಗರದ ಜನರು ಬೇರೆಡೆ ಹೋಗುವುದನ್ನು ಗಡಾಫಿ ಪರ ಸೇನಾ ಪಡೆ ತಡೆಯುತ್ತಿದೆ. ಏತನ್ಮಧ್ಯೆ ಮಾನವೀಯ ನೆರವಿನ ಕೊರತೆಯಾಗಿರುವ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿ ಟ್ರಿಪೋಲಿಯ ನೈಋತ್ಯ ದಿಕ್ಕಿಗೆ ಇರುವ ಬನಿ ವಾಲಿದ್ನಲ್ಲಿ ಮುಅಮ್ಮರ್ ಗಡಾಫಿ ಪರ ಸೈನಿಕರು ಈಗಲೂ ಹೋರಾಡುತ್ತಿದ್ದಾರೆ ಎಂದು ಹೊಸ ಸರಕಾರದ ಸೇನಾ ಪಡೆ ದೃಢಪಡಿಸಿದೆ.
ರಾಷ್ಟ್ರೀಯ ಮಧ್ಯಂತರ ಸರಕಾರ (ಎನ್ಟಿಸಿ) ಸೇನಾಪಡೆಗಳು ಮುಅಮ್ಮರ್ ಗಡಾಫಿ ಅವರ ತವರೂರಾದ ಸಿರ್ಟೆ ನಗರದ ಒಳಗೆ 10 ಕಿಲೋ ಮೀಟರ್ ಪ್ರವೇಶಿಸಿದ್ದು, ಇನ್ನೂ 15 ಕಿಲೋ ಮೀಟರ್ ಪ್ರವೇಶಿಸುವುದು ಅಗತ್ಯವಿದೆ ಎಂದು ತಿಳಿಸಿವೆ.
ಮುಅಮ್ಮರ್ ಗಡಾಫಿ ಪಡೆಗಳ ಮೇಲೆ ದಾಳಿ ನಡೆಸಿದ ಎನ್ಟಿಸಿ ಸೇನಾ ಪಡೆ ಯೋಧರು ಗ್ರಾಡ್ ರಾಕೆಟ್ಗಳು ಹಾಗೂ ಮಶಿನ್ ಗನ್ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ.
12ಕ್ಕೂ ಹೆಚ್ಚು ವಾಹನಗಳಲ್ಲಿ ಗ್ರೆನೇಡ್ಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಎನ್ಟಿಸಿ ಯೋಧರು ವಿಜಯದ ಸಂಕೇತ ತೋರಿಸುತ್ತಾ ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಸಾಗಿದ ದೃಶ್ಯ ಕಂಡು ಬಂದಿತು.
ಎನ್ಟಿಸಿ ಯೋಧರು ಸಿರ್ಟೆ ನಗರದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ತಪಾಸಣಾ ಕೇಂದ್ರವನ್ನು ಸ್ಥಾಪಿಸಿದ್ದು, ಇದು ನಗರವನ್ನು ತೊರೆದು ಹೋಗುತ್ತಿರುವ ನಾಗರಿಕರಲ್ಲಿ ಭಯದ ವಾತಾವರಣ ಮೂಡಿಸಿದೆ.
ನಗರದಲ್ಲಿರುವ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಬೆಂಗಾವಲು ಪಡೆಯ ವಾಹನದಲ್ಲಿರುವ ಮುಫ್ತಾ ಮಹಮದ್ ತಿಳಿಸಿದ್ದಾರೆ.
ಈ ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ಆಹಾರ, ನೀರು, ಪೆಟ್ರೋಲ್, ವಿದ್ಯುತ್ ದೊರೆಯುತ್ತಿಲ್ಲ. ಈ ಊರನ್ನು ಬಿಟ್ಟು ಹೋಗಲು ಮುಅಮ್ಮರ್ ಗಡಾಫಿ ಅವರ ಪಡೆಗಳು ಬಿಡುತ್ತಿಲ್ಲ ಎಂದು ನಾಗರಿಕರು ಆಪಾದಿಸಿದ್ದಾರೆ.
ಈ ಪ್ರದೇಶದಲ್ಲಿರುವ ಮಕ್ಕಳ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ನೀರು ಸರಬರಾಜಿನ ಮುಖ್ಯ ಕೊಳವೆ ಹಾಳಾಗಿರುವುದರಿಂದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಇದರಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ.