ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಲಿರುವ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಯೋತ್ಪಾದನೆ, ಗುಪ್ತಚರ ಜಾಲವನ್ನು ಬಲಪಡಿಸುವಿಕೆ, ಅಣುಸ್ಥಾವರಗಳು ಸೇರಿದಂತೆ ಕರಾವಳಿಯ ಭದ್ರತೆ ಹಾಗೂ ಇನ್ನಿತರ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗುವುದು.
ಸಚಿವ ಪಿ.ಚಿದಂಬರಂ ಅವರು ಗೃಹಖಾತೆಯನ್ನು ವಹಿಸಿಕೊಂಡ ಬಳಿಕ ಇಂತಹ ಸಭೆ ನಡೆಸುತ್ತಿರುವುದು ಇದು ಪ್ರಥಮವಾಗಿದೆ. ಅವರು ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಯಂತ್ರದ ಕುರಿತು ಎಲ್ಲಾ ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಗುಪ್ತಚರ ಜಾಲ ಮತ್ತು ಕರಾವಳಿ ಭದ್ರತೆಯನ್ನು ಬಲಪಡಿಸುವ ಕುರಿತು ಸಭೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಲಾಗಿದೆ. ಮುಂಬೈ ದಾಳಿಕೋರರು ಸಮುದ್ರಮಾರ್ಗವಾಗಿ ಮೆಟ್ರೋಪಾಲಿಟನ್ ನಗರಕ್ಕೆ ಪ್ರವೇಶಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಅಣುಶಕ್ತಿ ಸ್ಥಾವರಗಳು ಸೇರಿದಂತೆ ಪ್ರಮುಖ ನೆಲೆಗಳ ಭದ್ರತೆಯ ಕುರಿತೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.
|