ತಮಿಳ್ನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಪುತ್ರ, ನಗರಾಭಿವೃದ್ಧಿ ಸಚಿವ ಸ್ಟಾಲಿನ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವಂತೆ ಚುನಾವಣಾ ಆಯೋಗವು ಆದೇಶಿಸಿದೆ. ಜನವರಿ 9ರಂದು ತಿರುಮಂಗಲಂ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು ಇಲ್ಲಿ ಸ್ಟಾಲಿನ್ ಮತದಾರರಿಗೆ ಹಣಹಂಚಿರುವ ಆರೋಪವನ್ನು ಎದುರಿಸುತ್ತಿದ್ದಾರೆ.
ಲಂಚದ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ಚುನಾವಣಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಸ್ಟಾಲಿನ್ ಹಣ ಹಂಚುವ ದೃಶ್ಯವನ್ನು ದೂರದರ್ಶನ ವಾಹಿನಿಗಳು ಬಿತ್ತರಿಸಿರುವ ಬಳಿಕ, ಆಡಳಿತಾರೂಢ ಡಿಎಂಕೆ ಪಕ್ಷಕ್ಕೂ ನೋಟಿಸು ನೀಡಲು ಚುನಾವಣಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಕೊಯಂಬುತ್ತೂರಿನಲ್ಲೂ ಹಣ ಹಂಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆಗೆ ನೋಟೀಸು ನೀಡುವಂತೆ ಮತ್ತು ಎಂಜಿಆರ್ ಮಂತ್ರಮ್ನ ಜಿಲ್ಲಾ ಜತೆಕಾರ್ಯದರ್ಶಿ ದಂಡಪಾಣಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶಿಸಲಾಗಿದೆ.
ಏತನ್ಮಧ್ಯೆ, ಎಐಎಡಿಎಂಕೆ, ಸಿಪಿಐ ಮತ್ತು ಎಂಡಿಎಂಕೆ ಸಂಸದರ ನಿಯೋಗ ಒಂದು ಸೋಮವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಸ್ಟಾಲಿನ್ ಅವರು ಮತದಾರರಿಗೆ ಹಣ ಹಂಚುತ್ತಿರುವ ದೂರು ನೀಡಿದೆ. |