ಗುರುವಾರ ತನ್ನ 53ನೆ ಹುಟ್ಟು ಹಬ್ಬ ಆಚರಿಸಿಕೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ, ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ, ಆರ್ಥಿಕ ಹಿಂಜರಿತವಿದ್ದರೂ ತನಗೆ ದುಪ್ಪಟ್ಟು ನಿಧಿ ಸಮರ್ಪಿಸಿದ ತನ್ನ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
1956ರಲ್ಲಿ ಜನಿಸಿರುವ ಮಾಯಾವತಿಗೆ ಹುಟ್ಟು ಹಬ್ಬದ ಉಡುಗೋರೆಯಾಗಿ ನಿಧಿ ಸಂಗ್ರಹಿಸಿ ಅರ್ಪಿಸುವುದು ಬಿಎಸ್ಪಿ ಪಕ್ಷವು ಇತ್ತೀಚಿನ ವರ್ಷಗಳಲ್ಲಿ ನಡೆಸಿಕೊಂಡು ಬಂದಿರುವ ಪ್ರವೃತ್ತಿ. ಕಳೆದ ವರ್ಷ 52 ಕೋಟಿ ನೀಡಲಾಗಿದೆ ಎಂದು ಅವರು ತನ್ನ ಆದಾಯ ತೆರಿಗೆ ಘೋಷಣೆಯಲ್ಲಿ ಹೇಳಿಕೊಂಡಿದ್ದರು.
ನಿಧಿ ಸಂಗ್ರಹಕ್ಕಾಗಿ ತನ್ನ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿರುವ ಮಾಯಾ, ವಿರೋಧ ಪಕ್ಷಗಳಿಗೂ ಧನ್ಯವಾದ ಅರ್ಪಿಸುವುದಾಗಿ ವ್ಯಂಗ್ಯವಾಡಿದ್ದಾರೆ.
ಮಾಯಾ ಅಭಿಮಾನಿಗಳು ತಮ್ಮ ಅಧಿನಾಯಕಿಗಾಗಿ ನಿಧಿ ಸಂಗ್ರಹಿಸಿದ್ದಾರೆ. ಎಲ್ಲಾ ವಿಧಗಳಿಂದ ಕಾರ್ಯಕರ್ತರು ಸಂಗ್ರಹಕ್ಕೆ ಇಳಿದಿದ್ದು, ಒಟ್ಟು ಎಷ್ಟು ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ಇಲ್ಲ.
|