ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಮಂಗಳವಾರ ಶ್ರೀಲಂಕಾಗೆ ಧಾವಿಸಲಿದ್ದಾರೆ. ಲಂಕಾ ಸೇನೆಯು ಎರಡುದಿನಗಳ ಹಿಂದೆ ಮುಲ್ಲೈಟ್ಟಿವು ಎಂಬಲ್ಲಿ ಎಲ್ಟಿಟಿಇಯ ಕೊನೆಯ ಕೋಟೆಯನ್ನು ವಶಪಡಿಸಿಕೊಂಡಿದೆ ಎಂದು ಶ್ರೀಲಂಕಾ ಹೇಳಿರುವ ಹಿನ್ನೆಲೆಯಲ್ಲಿ ಪ್ರಣಬ್ ತುರ್ತು ಭೇಟಿ ನೀಡುತ್ತಿದ್ದಾರೆ.ತನ್ನ ಎರಡು ದಿನಗಳ ಭೇಟಿಯ ವೇಳೆ ಪ್ರಣಬ್ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆ ಹಾಗೂ ವಿದೇಶಾಂಗ ಸಚಿವ ರೋಹಿತ್ ಬೊಗೊಲ್ಲಗಾಮರನ್ನು ಭೇಟಿಯಾಗಿ ಉತ್ತರ ಶ್ರೀಲಂಕಾದ ಕುರಿತು ಚರ್ಚಿಸಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.ಶ್ರೀಲಂಕಾದಲ್ಲಿ ತಾಂಡವವಾಡುತ್ತಿರುವ ಜನಾಂಗೀಯ ಸಮಸ್ಯೆಗೆ ರಾಜಕೀಯ ಪರಿಹಾರವನ್ನು ಕಂಡುಕೊಳ್ಳವಂತೆ ರಾಜಪಕ್ಷೆ ಅವರನ್ನು ಪ್ರಣಬ್ ಈ ಸಂದರ್ಭದಲ್ಲಿ ಒತ್ತಾಯಿಸಲಿದ್ದಾರೆ. ಇತರ ಪ್ರಜೆಗಳಂತೆ ಶ್ರೀಲಂಕಾದ ಮೂಲನಿವಾಸಿ ತಮಿಳರಿಗೆ ಅವಕಾಶಗಳು ಲಭಿಸುವಂತೆ ಪ್ಯಾಕೇಜುಗಳನ್ನು ಶೀಘ್ರ ಜಾರಿಗೊಳಿಸೇಬೇಕೆಂದೂ ಪ್ರಣಬ್ ಒತ್ತಾಯಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.ಎಲ್ಟಿಟಿಇ ವಿರುದ್ಧ ಸೇನಾ ವಿಜಯವು ಅಲ್ಲಿನ ಜನಾಂಗೀಯ ಸಮಸ್ಯೆಯನ್ನು ಪರಿಹರಿಸದು, ಸರಕಾರವು ತಮಿಳರು ಸೇರಿದಂತೆ ಎಲ್ಲಾ ಸಮುದಾಯವು ಶ್ರೀಲಂಕಾದೊಳಗೆ ಘನತೆಯಿಂದ ಬದುಕುವಂತಹ ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಭಾರತವು ಒತ್ತಾಯಿಸುತ್ತಿದೆ. |