ಭಾರತವು ಶ್ರೀಲಂಕಾದಲ್ಲಿ ಸಂತ್ರಸ್ತರ ನೆರವಿಗಾಗಿ ಸೇನಾ ವೈದ್ಯರ ತಂಡ ಒಂದನ್ನು ಮುಂದಿನ ವಾರದಲ್ಲಿ ಕಳುಹಿಸಲಿದೆ.
ತಮಿಳ್ನಾಡು ರಾಜಕೀಯ ಪಕ್ಷಗಳ ಒತ್ತಾಯದ ಹಿನ್ನೆಲೆಯಲ್ಲಿ ಕೇಂದ್ರವು ಈ ನಿರ್ಧಾರಕ್ಕೆ ಬಂದಿದೆ. ದ್ವೀಪ ರಾಷ್ಟ್ರದ ಈಶಾನ್ಯದಲ್ಲಿರುವ ಪುಲ್ಮೊಡಿ ಎಂಬ ಎಲ್ಟಿಟಿಇ ನಿಯಂತ್ರಣದಲ್ಲಿದ್ದ ಸ್ಥಳದಲ್ಲಿ ಈ ತಂಡವು ಕಾರ್ಯಾಚರಿಸಲಿದೆ.
ಶ್ರೀಲಂಕಾ ಸೇನೆ ಮತ್ತು ಎಲ್ಟಿಟಿಇ ನಡುವಿನ ಹೋರಾಟದಿಂದ ತೊಂದರೆಗೀಡಾಗಿರುವ ಅಮಾಯಕರಿಗೆ ವೈದ್ಯಕೀಯ ತಂಡವು ಸಹಾಯಹಸ್ತ ನೀಡಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶ್ರೀಲಂಕಾ ಕುರಿತು ಫೆ.24ರಂದೇ ವಿಸ್ತೃತ ವರದಿ ತಯಾರಿಸಿದ್ದರೂ, ರಕ್ಷಣಾ ಸಚಿವಾಲಯವು ಮಾರ್ಚ್ ಮೂರರಂದು ಮಾಹಿತಿ ಕಳುಹಿಸಿದೆ ಎಂಬುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ.
ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗಳು ಮತ್ತು ಪ್ಯಾರಾಮೆಡಿಕ್ಗಳನ್ನು ಹೊಂದಿರುವ 50 ಮಂದಿಯ ತಂಡವವನ್ನು ಹೊತ್ತ ವಿಮಾನವು ಮುಂದಿನ ವಾರ ಪುಲ್ಮೊಡಿಗೆ ಹಾರಲಿದೆ. ಇಲ್ಲಿ ಆಪರೇಶನ್ ಥಿಯೇಟರ್ ಸ್ಥಾಪಿಸಲು ಲಂಕಾ ಸರ್ಕಾರವು ಎರಡು ಕಟ್ಟಗಳನ್ನು ಒದಗಿಸಲಿದೆ.
ಲಂಕಾ ಸರ್ಕಾರವು ಆಸ್ಪತ್ರೆಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.
|