ತನ್ನನ್ನು ವಜಾಮಾಡಲು ರಾಷ್ಟ್ರಪತಿಯವರಿಗೆ ಶಿಫಾರಸ್ಸು ಮಾಡಿರುವ ಮುಖ್ಯಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿಯವರ ಮೇಲೆ ಯಾವುದೇ ಬೇಸರವಿಲ್ಲ ಎಂದು ನಿಯೋಜಿತ ಮುಖ್ಯಚುನಾವಣಾ ಆಯುಕ್ತ ನವೀನ್ ಚಾವ್ಲಾ ಹೇಳಿದ್ದಾರೆ.
ನಾವು ಈಗ ಮಾಡುತ್ತಿರುವಂತೆ ಮುಕ್ತ, ನ್ಯಾಯೋಚಿತ ಹಾಗೂ ಪಾರದರ್ಶಕ ಚುನಾವಣೆ ನಡೆಸುವಿಕೆಯನ್ನು ಮುಂದುವರಿಸಲಿದ್ದೇವೆ ಎಂದು ಅವರು ತಮ್ಮ ಭಡ್ತಿಯ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು.
ಉತ್ತರ ಪ್ರದೇಶದಲ್ಲಿ ಚುನಾವಣಾ ಸಿದ್ಧತೆಗಳ ವೀಕ್ಷಣೆಗಾಗಿ ಮುಖ್ಯಚುನಾವಣಾ ಆಯುಕ್ತ ಗೋಪಾಲಸ್ವಾಮಿ ಹಾಗೂ ಸಹ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿಯವರ ಜತೆ ತೆರಳಿರುವ ಅವರು ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸೂಕ್ತ ಚುನಾವಣೆ ನಡೆಸುವ ವಿಚಾರವಾಗಿ ಪ್ರಸ್ತುತ ಚುನಾವಣಾ ಆಯೋಗ ಸೇರಿದಂತೆ ಈ ಹಿಂದಿನ ಚುನಾವಣಾ ಆಯುಕ್ತರಾದ ಟಿ.ಎನ್.ಶೇಷನ್, ಎಂ.ಎಸ್. ಗಿಲ್, ಜೆ.ಎಂ. ಲಿಂಗ್ಡೋ, ಟಿ.ಎಸ್. ಕೃಷ್ಣಮೂರ್ತಿ ಹಾಗೂ ಬಿ.ಬಿ. ಟಂಡನ್ ಅವರುಗಳನ್ನ ಚಾವ್ಲಾ ಮನಪೂರ್ವಕವಾಗಿ ಹೊಗಳಿದರು. |