ರಾಜ್ಯದಲ್ಲಿ ಭದ್ರತಾ ಪರಿಸ್ಥಿತಿ ಕುರಿತು ಚರ್ಚಿಸಲು ನಿಗದಿಯಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗಿನ ಭೇಟಿಯನ್ನು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ಮುಂದೂಡಬೇಕಾಗಿಬಂದಿದ್ದು, ಇದಕ್ಕೆ ಕಾರಣ, ಮುಖ್ಯಮಂತ್ರಿಗೆ ಪುರುಸೊತ್ತಿಲ್ಲ!
ತಾನು ತನ್ನ ಕ್ಷೇತ್ರದ ಸಂದರ್ಶನಕ್ಕೆ ತೆರಳುತ್ತಿರುವುದರಿಂದಾಗಿ ಮೂರನೇ ಬಾರಿಗೆ ಮರುನಿಗದಿಯಾಗಿದ್ದ ಈ ಭದ್ರತಾ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದರಿಂದ, ಕೊನೆ ಕ್ಷಣದಲ್ಲಿ ಕರ್ನಾಟಕ ಭೇಟಿ ಕೈಬಿಡಬೇಕಾಯಿತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆ ತಿಳಿಸಿದೆ.
ಪ್ರತಿಯೊಂದು ರಾಜ್ಯದಲ್ಲಿ ಭದ್ರತಾ ಪರಿಶೀಲನೆ ಮತ್ತು ಸನ್ನದ್ಧತೆಯ ಕುರಿತು ತಿಳಿದುಕೊಳ್ಳುವ ನಿಟ್ಟಿನಲ್ಲಿ, ಕರ್ನಾಟಕ ಸರಕಾರವು ಈ ಮಾತುಕತೆಯನ್ನು ಮಾರ್ಚ್ 4ಕ್ಕೆ ನಿಗದಿಪಡಿಸಿತ್ತು. ಇದರಲ್ಲಿ ಕೇಂದ್ರ ಗೃಹ ಸಚಿವ, ಮುಖ್ಯಮಂತ್ರಿ ಹಾಗೂ ರಾಜ್ಯದ ಅಧಿಕಾರಿಗಳು ಭಾಗವಹಿಸಬೇಕಿತ್ತು.
ಆದರೆ ಈ ದಿನಾಂಕವು ಮುಖ್ಯಮಂತ್ರಿಗೆ ಅನುಕೂಲವಾಗಿಲ್ಲ ಎಂಬ ಕಾರಣಕ್ಕೆ, ಇದನ್ನು ಮಾರ್ಚ್ 5ಕ್ಕೆ ನಡೆಸುವಂತೆ ರಾಜ್ಯ ಸರಕಾರ ವಿನಂತಿಸಿತ್ತು.
ಇದನ್ನು ಕೇಂದ್ರ ಗೃಹ ಸಚಿವಾಲಯ ಒಪ್ಪಿತ್ತಾದರೂ, ಈ ದಿನಾಂಕವೂ ಅನುಕೂಲಕರವಾಗಿಲ್ಲ ಎಂದು ರಾಜ್ಯ ಸರಕಾರವು ಮಾ.3ರಂದು ಮತ್ತೆ ಹೇಳಿತ್ತು. ಇದಕ್ಕಾಗಿ ಮಾರ್ಚ್ 7ಕ್ಕೆ ದಿನಾಂಕ ನಿಗದಿಪಡಿಸಲಾಯಿತು. ಈಗ ಈ ದಿನಾಂಕದಂದು ಕೂಡ ಮುಖ್ಯಮಂತ್ರಿ ಕಾರ್ಯ ನಿರತರಾಗಿದ್ದಾರೆ ಎಂಬ ಸಂದೇಶ ಬಂದಿರುವುದಾಗಿ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. |