ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಕಾಮನ್ವೆಲ್ತ್ ಕ್ರೀಡಾಕೂಟದ ಕುರಿತು ಪ್ರಮುಖ ದೈನಿಕಗಳಿಗೆ ಪೂರ್ಣಪುಟ ಜಾಹೀರಾತು ನೀಡಿರುವ ಕೇಂದ್ರದ ಕ್ರಮದಿಂದ ಕಣ್ಣುಕೆಂಪಾಗಿಸಿರುವ ಚುನಾವಣಾ ಆಯೋಗವು, ಇದರ ವೆಚ್ಚವನ್ನು, ಈ ಜಾಹೀರಾತು ಬಿಡುಗಡೆ ಮಾಡಿರುವ ಅಧಿಕಾರಿಗಳ ವೈಯಕ್ತಿಕ ಖಾತೆಯಿಂದ ಭರಿಸುವಂತೆ ನಿರ್ದೇಶನ ನೀಡಿದೆ.
ಯವಜನ ಮತ್ತು ಕ್ರೀಡಾಸಚಿವಾಲಯ, ಸಂಪುಟ ಕಾರ್ಯದರ್ಶಿ ಹಾಗೂ ದೆಹಲಿ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ, ಈ ಜಾಹೀರಾತನ್ನು ಬಿಡುಗಡೆ ಮಾಡಿರುವ ಅಧಿಕಾರಿಗಳ ಹೆಸರು, ವಿವರ ಹಾಗೂ ಇದಕ್ಕೆ ವಿನಿಯೋಗಿಸಲಾದ ಒಟ್ಟು ಮೊತ್ತದ ವಿವರಣೆಯನ್ನು ಕೇಳಿದೆ.
ಈ ಜಾಹೀರಾತುಗಳ ಒಟ್ಟು ವೆಚ್ಚವನ್ನು, ಜಾಹೀರಾತು ಬಿಡುಗಡೆ ಮಾಡಿರುವ ಅಧಿಕಾರಿಗಳು ಮತ್ತು ಸಂಬಂಧಿಸಿದ ವ್ಯಕ್ತಿಗಳ ವೈಯಕ್ತಿಕ ಖಾತೆಯಿಂದ ಭರಿಸಬೇಕು ಎಂದು ಪತ್ರದಲ್ಲಿ ತಾಕೀತು ಮಾಡಲಾಗಿದೆ.
ಪ್ರಕಟಿತ ಜಾಹೀರಾತಿನಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ಸಾಧನೆಯನ್ನು ಕೊಚ್ಚಿಕೊಳ್ಳಲಾಗಿದೆ. ಇದರಲ್ಲಿ 24 ಫ್ಲೈ ಓವರ್ಗಳು, 75 ಏರೋಬ್ರಿಜ್ ಏರ್ಪೋರ್ಟ್, 1285 ಕಿಲೋಮೀಟರ್ ಉತ್ತಮ ರಸ್ತೆಗಳು, 5000 ಆಧುನಿಕ ಬಸ್ಸುಗಳ ಜಾರಿಯ ಸಾಧನೆಯನ್ನು ಹೇಳಲಾಗಿದ್ದು, ಇದನ್ನು ಚುನಾವಣಾ ಆಯೋಗವು ಬೆಟ್ಟು ಮಾಡಿದೆ.
"ಜಾಹೀರಾತು ಪ್ರಕಟಣೆಯು ಚುನಾವಣಾ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸಾರ್ವಜನಿಕ ವೆಚ್ಚದಿಂದ ಸರ್ಕಾರದ ಸಾಧನೆಗಳನ್ನು ಪ್ರಕಟಿಸುವುದನ್ನು ಇದು ನಿರ್ಬಂಧಿಸುತ್ತದೆ" ಎಂದು ಆಯೋಗವು ಹೇಳಿದೆಯಲ್ಲದೆ ಈ ಕುರಿತು ವರದಿಯೊಂದನ್ನು ಸಲ್ಲಿಸಲೂ ತಿಳಿಸಿದೆ. |