"ಒಂದೇ ವೇಳೆ ನಾನೇನಾದರೂ ಈ ದೇಶದ ಗೃಹಸಚಿವನಾಗಿರುತ್ತಿದ್ದರೆ, ಮುಸ್ಲಿಂ ವಿರುದ್ಧ ಭಾಷಣ ಮಾಡಿರುವ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿಯವರನ್ನು ಯಾವುದೇ ಪರಿಣಾಮಗಳನ್ನೂ ಲೆಕ್ಕಿಸದೆ ರೋಲರ್ ಕೆಳಗೆ ಹಾಕಿ ಪುಡಿಪುಡಿ ಮಾಡುತ್ತಿದ್ದೆ" ಎಂಬುದಾಗಿ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
2004ರಲ್ಲಿ ಅಧಿಕಾರಕ್ಕೇರಲು ಬಿಜೆಪಿಯ ಕೋಮುವಾದದಿಂದ ತಾನು ಹಾಗೂ ತನ್ನ ಪಕ್ಷ ಹೇಗೆ ಜಿಗುಪ್ಸೆಗೊಂಡಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಅವರು, ಆರ್ಜೆಡಿ ಅಭ್ಯರ್ಥಿ ಕೇಂದ್ರ ಸಚಿವ ತಸ್ಲಿಮುದ್ದೀನ್ ಅವರು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇದೇ ವೇಳೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದ ಅವರು, ಬಾಬ್ರಿ ಮಸೀದಿಯನ್ನು ಉರುಳಿಸಲು ನೇರವಾಗಿ ಪಾಲ್ಗೊಂಡಿರುವ ಎಲ್.ಕೆ.ಆಡ್ವಾಣಿ ಅವರ ತೊಡೆ ಮೇಲೆ ನಿತೀಶ್ ಕುಳಿತಿದ್ದಾರೆ ಎಂಬುದಾಗಿ ದೂರಿದರಲ್ಲದೆ, ಅವರ ಕನಸೆಂದೂ ನನಸಾಗದು ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಜೆಪಿ ಅಧ್ಯಕ್ಷ ರಾಮವಿಲಾಸ್ ಪಾಸ್ವಾನ್ ಅವರು, ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಕೈಜೋಡಿಸಿದ್ದರೂ, ತಾನು ಜಾತ್ಯತೀತ ಎನ್ನುತ್ತಾ ಅಲ್ಪಸಂಖ್ಯಾತರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು. |