ಮನಮೋಹನ್ ಸಿಂಗ್ ವಿರುದ್ಧ ಬಿಜೆಪಿಯ ದುರ್ಬಲ ಪ್ರದಾನಿ ಎಂಬ ಟೀಕೆಗೆ ಕಾಂಗ್ರೆಸ್ ವರಿಷ್ಟೆ ಸೋನಿಯಾ ಗಾಂಧಿ ಇದೀಗ ತನ್ನ ವಾಗ್ದಾಣವನ್ನು ಬಿಜೆಪಿಯತ್ತ ತಿರುಗಿಸಿದ್ದಾರೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಸ್ವಂತ ನಿರ್ಣಯ ತೆಗೆದುಕೊಳ್ಳಲಾಗದ ಹಾಗೂ ನಿರ್ಣಯಕ್ಕಾಗಿ ಸಂಸ್ಥೆಯೊಂದನ್ನು ಅವಲಂಬಿಸುವ ವ್ಯಕ್ತಿ ಎಂದು ಸೋನಿಯಾ ಟೀಕಿಸಿದ್ದಾರೆ.ಧಾರ್, ರತ್ಲಂ ಹಾಗೂ ಉಜ್ಜಯಿನಿಗಳಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಉನ್ನತ ಸ್ಥಾನದಲ್ಲರುವ ಒಬ್ಬರಿಗೂ ಒಂದು ಸಣ್ಣ ವಿಷಯಕ್ಕೂ ಸ್ವಂತ ನಿರ್ಣಯ ತೆಗೆದುಕೊಳ್ಳುವ ತಾಕತ್ತು ಇಲ್ಲ. ಅವರೆಲ್ಲರಿಗೂ ಪ್ರತಿ ನಿರ್ಣಯಕ್ಕೂ ಸಂಸ್ಥೆಯೊಂದರ ಅನುಮತಿ ಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ತನ್ನ ನಿರ್ಣಯವನ್ನು ಜಾರಿಗೆ ತರಲು ಯಾವುದೇ ಸಂಘಸಂಸ್ಥೆಯ ಅನುಮತಿ ಬೇಕಾಗಿಲ್ಲ. ತನಗೆ ಅನಿಸಿದ್ದನ್ನು ಸೂಕ್ತ ಚರ್ಚೆಯೊಂದಿಗೆ ಜಾರಿಗೆ ತರಲು ಅದಕ್ಕೆ ದಿಟ್ಟತನವಿದೆ ಎಂದರು.ಇದೇ ಸಂದರ್ಭ ಪ್ರಧಾನಿ ಹಾಗೂ ಕಾಂಗ್ರೆಸ್ನ ಮುಂದಿನ ಪ್ರಧಾನಿ ಅಭ್ಯರ್ಥಿ ಮನಮೋಹನ್ ಸಿಂಗ್ ಅವರು ಒಬ್ಬ ಆತ್ಮವಿಶ್ವಾಸ ಹೊಂದಿದ ದಿಟ್ಟ ಪ್ರಧಾನಿ ಎಂದು ಬಣ್ಣಿಸಿದ ಸೋನಿಯಾ, ಅಮೆರಿಕ ಜತೆಗೆ ಅಣು ಒಪ್ಪಂದದಂತಹ ಕ್ಲಿಷ್ಟಪರಿಸ್ಥಿತಿಯಲ್ಲೂ ಅವರು ಪರಿಸ್ಥಿತಿ ಜತೆಗೆ ರಾಜಿಯಾಗದೆ ತಮ್ಮ ಆತ್ಮಬಲವನ್ನು ಪ್ರದರ್ಶಿಸಿದರು ಎಂದರು.ಆದರೆ, ಬಿಜೆಪಿ ಅಂದು ಅಣು ಒಪ್ಪಂದವನ್ನು ವಿರೋಧಿಸಿ ಸಂಸತ್ತಿನ ಕಲಾಪಕ್ಕೂ ಆಸ್ಪದ ನೀಡಿರಲಿಲ್ಲ. ಆದರೆ, ಇದೀಗ ಬಿಜೆಪಿಯೂ ಅಣು ಒಪ್ಪಂದಕ್ಕೆ ಬೆಂಬಲ ನೀಡುತ್ತಿದೆ ಎಂದು ಸೋನಿಯಾ ಅಣಕಿಸಿದರು.ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ತೀರ್ಥಯಾತ್ರಾ ಸ್ಥಳಗಳಾದ ಉಜ್ಜಯಿನಿ, ಹರಿದ್ವಾರ, ವಾರಣಾಸಿ, ಮಧುರೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆದರೆ, ಬಿಜೆಪಿ ಅಧಿಕಾರಾವಧಿಯಲ್ಲಿ ಈ ಕ್ಷೇತ್ರಗಳ ಸುಧಾರಣೆ ಏನೇನೂ ಆಗಿರಲಿಲ್ಲ ಎಂದು ಸೋನಿಯಾ ಟೀಕಿಸಿದರು. |