ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚನೆಮಾಡಿ, ಖಾತೆಯೆಲ್ಲ ಹಂಚಿರುವ ಕಾಂಗ್ರೆಸ್ ಇದೀಗ ತನ್ನ ಪಕ್ಷದೊಳಗೆ ಸಾಂಸ್ಥಿಕ ಬದಲಾವಣೆ ಮಾಡಲು ಮುಂದಾಗಿದೆ. ಪಕ್ಷವು ಏಕವ್ಯಕ್ತಿಗೆ ಏಕಹುದ್ದೆ ಎಂಬ ಸೂತ್ರವನ್ನು ಪ್ರಯೋಗಿಸಲಿದೆ ಎಂಬ ಸೂಚನೆಗಳು ಕಂಡು ಬರುತ್ತಿವೆ.
ಇದಕ್ಕೆ ಪೂರಕ ಎಂಬಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು "ತನಗೆ ಏಕ ಕಾಲಕ್ಕೆ ಒಂದಕ್ಕಿಂತ ಹೆಚ್ಚು ಹುದ್ದೆ ನಿರ್ವಹಿಸಲು ಸಾಧ್ಯವಿಲ್ಲ, ಒಂದೊಮ್ಮೆ ಹಾಗೆ ಮಾಡಿದಲ್ಲಿ ತಾನು ತನ್ನ ಹುದ್ದೆಗೆ ನ್ಯಾಯ ಒದಗಿಸಲಾಗದು" ಎಂದು ಹೇಳಿದ್ದರು. ಅವರು ಪಕ್ಷಕ್ಕಾಗಿ ದುಡಿಯಬೇಕು ಎಂಬ ಹಿನ್ನೆಲೆಯಲ್ಲಿ ಸಚಿವ ಸ್ಥಾನವನ್ನು ತಿರಸ್ಕರಿಸಿದ್ದರು.
ಸದ್ಯವೇ ಸಂಘಟನೆಯಲ್ಲಿ ಬದಲಾವಣೆ ತರಲಾಗುವುದು ಎಂಬುದಾಗಿ ಎಐಸಿಸಿ ಮಾಧ್ಯಮ ಮುಖ್ಯಸ್ಥ ಜನಾರ್ದನ ದ್ವಿವೇದಿ ಹೇಳಿದ್ದಾರೆ. ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಎಷ್ಟು ಶೀಘ್ರದಲ್ಲಿ ಕಾರ್ಯಕಾರಿ ಮಂಡಳಿಯು ಬದಲಾವಣೆಯಾಗಲಿದೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ ಅವರು ನುಣುಚಿಕೊಂಡರು.
ಸಂಪುಟದಲ್ಲಿ ಸ್ಥಾನ ಪಡೆದವರನ್ನು ಪಕ್ಷದ ಕಾರ್ಯದಿಂದ ಮುಕ್ತಿಗೊಳಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ದ್ವಿವೇದಿ, "ಇದನ್ನು ಖಚಿತವಾಗಿ ಹೇಳಲಾಗದು. ಆದರೆ ಸರ್ಕಾರದಲ್ಲಿ ಕಾರ್ಯನಿರ್ವಹಿಸುವವರು ಅದರ ಮೇಲೆ ಗಮನ ಕೇಂದ್ರೀಕರಿಸುವಂತೆ ಮತ್ತು ಪಕ್ಷಕ್ಕಾಗಿ ಕಾರ್ಯನಿರ್ವಹಿಸುವವರು ಸಾಂಸ್ಥಿಕ ಕಾರ್ಯಗಳನ್ನು ನಿರ್ವಹಿಸುವಂತೆ ಪ್ರಯತ್ನಿಲಾಗುವುದು" ಎಂದು ನುಡಿದರು.
ಲೋಕಸಭಾ ಚುನಾವಣೆಯಲ್ಲಿ ವಿಜಯಿಯಾಗಿರುವ ಬಳಿಕ ಪಕ್ಷದ ಆದ್ಯತೆಗಳೇನು ಎಂಬ ಸುದ್ದಿಗಾರರ ಪ್ರಶ್ನೆಗೆ, ಸಂಸ್ಥೆಯನ್ನು ಇನ್ನಷ್ಟು ದಕ್ಷಗೊಳಿಸುವುದು, ಸದಸ್ಯತ್ವ ಅಭಿಯಾನದ ಆರಂಭ ಮತ್ತು 2010ರೊಳಗಾಗಿ ಸಾಂಸ್ಥಿಕ ಚುನಾವಣೆಯನ್ನು ಸಂಪೂರ್ಣಗೊಳಿಸಲಾಗುವುದು ಎಂದು ನುಡಿದರು.
ಗುಲಾಂ ನಬಿ ಅಜಾದ್, ಮುಕುಲ್ ವಾಸ್ನಿಕ್, ಪೃಥ್ವಿರಾಜ್ ಚೌವಾಣ್ ಹಾಗೂ ವಿ. ನಾರಾಯಣ ಸ್ವಾಮಿ ಅವರುಗಳು ಸಂಪುಟದಲ್ಲಿ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. |