ಒಂದು ತಿಂಗಳ ಕಾಲ ಐದು ಹಂತದ ಚುನಾವಣೆ, ಮತಎಣಿಕೆ ಬಳಿಕ ಸಂಪುಟ ರಚನೆ ಈ ಎಲ್ಲ ಹಂತಗಳನ್ನು ದಾಟಿ ಇದೀಗ ಹದಿನೈದನೆ ಲೋಕಸಭೆಯ ಪ್ರಥಮ ಅಧಿವೇಶನ ಆರಂಭಗೊಂಡಿದೆ.
ಅಧಿವೇಶನದಲ್ಲಿ ಪ್ರಥಮವಾಗಿ ನೂತನವಾಗಿ ಆಯ್ಕೆಯಾಗಿರುವ ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಲು ಆರಂಭಿಸಿದ್ದಾರೆ.
ಲೋಕಸಭಾ ನಾಯಕ ಪ್ರಣಬ್ ಮುಖರ್ಜಿ ಪ್ರಥಮವಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು.
ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸೋನಿಯಾ ಸತ್ಯನಿಷ್ಠೆಯ ಹೆಸರಿಲ್ಲಿ ಪ್ರಮಾಣಮಾಡಿದರು. ಹಿರಿಯ ನಾಯಕಿ ಸುಮಿತ್ರಾ ಮಹಾಜನ್ ಸಂಸ್ಕೃತದಲ್ಲಿ, ಪಿ.ಚಿದಂಬರಂ ತಮಿಳಿನಲ್ಲಿ ಪ್ರಮಾಣ ಮಾಡಿದರು. ಕರ್ನಾಟಕದ ಸಂಸದ, ಕಾನೂನು ಸಚಿವ ವೀರಪ್ಪ ಮೊಯ್ಲಿ ಆಂಗ್ಲ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಿದರು.
ಹಿರಿಯ ಸಂಸದ ಮಾಣಿಕ್ ರಾವ್ ಗಾವಿತ್ ಅವರು ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಸಂಸದೀಯ ಸಮಿತಿಗಳ ಅಧ್ಯಕ್ಷರುಗಳ ಬಳಿಕ ಇತರ ಸಂಸದರು ರಾಜ್ಯವಹಿಯಾಗಿ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ.
ತೃತೀಯ ದಿನದಂದು ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸ್ಪೀಕರ್ ಸ್ಥಾನ ಆಡಳಿತ ಪಕ್ಷಕ್ಕಾದರೆ, ಡೆಪ್ಯುಟಿ ಸ್ಪೀಕರ್ ಸ್ಥಾನ ವಿರೋಧ ಪಕ್ಷ ಪಡೆಯಲಿದೆ. ಕಾಂಗ್ರೆಸ್ನ ಮೀರಾ ಕುಮಾರ್ ಅವರು ಸ್ಪೀಕರ್ ಸ್ಥಾನ ವಹಿಸುವುದು ಬಹುತೇಕ ನಿಚ್ಚಳವಾಗಿದೆ.
ಸ್ಪೀಕರ್ ಆಯ್ಕೆ ಪ್ರಕ್ರಿಯೆ ಬುಧವಾರ ನಡೆದರೆ ಗುರುವಾರದಂದು ರಾಷ್ಟ್ರಪತಿಯವರು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಜೆಟ್ ಅಧಿವೇಶನವು ಜುಲೈ ಪ್ರಥಮ ವಾರದಲ್ಲಿ ನಡೆಯಲಿದೆ. |