ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆಗಾಗಿ ಮಧುವಣಗಿತ್ತಿಯನ್ನು ಬೆಂಕಿ ಹಚ್ಚಿ ಕೊಲ್ಲುವ ವ್ಯಕ್ತಿಗಳನ್ನು ಗಲ್ಲಿಗೇರಿಸಬೇಕಾದ ಅಗತ್ಯವಿದೆ ಮತ್ತು ಅಂಥವರಿಗೆ ಯಾವುದೇ ದಯೆ ತೋರಿಸಲೇಬಾರದು ಎಂದು ಸರ್ವೋಚ್ಛನ್ಯಾಯಾಲಯ ಸೋಮವಾರ ಖಾರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.ಹರ್ಯಾಣದಲ್ಲಿ ಕೆಲವು ವರ್ಷಗಳ ಹಿಂದೆ ವರದಕ್ಷಿಣೆ ಕಿರುಕುಳ ನೀಡಿ ವಧುವನ್ನು ಬೆಂಕಿಹಚ್ಚಿ ಕೊಂದ ಪ್ರಕರಣದ ಕುರಿತು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ರಜಾಕಾಲ ಪೀಠದ ನ್ಯಾಯಾಧೀಶರಾದ ಮಾರ್ಕಂಡೆಯಾ ಕಾಟ್ಜು ಮತ್ತು ದೀಪಕ್ ವರ್ಮಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಭಾರತದಲ್ಲಿ ವರದಕ್ಷಿಣೆ ಕಿರುಕುಳದಿಂದ ಸಾವಿರಾರು ಅಮಾಯಕ ವಧುಗಳು ಸಾಯುತ್ತಿದ್ದಾರೆ. ಅದು ಹೇಗೆ ಬೆಂಕಿಹಚ್ಚಿ ಕೊಲ್ಲುತ್ತೀರಿ? ಎಂದು ಖಾರವಾಗಿ ಪ್ರಶ್ನಿಸಿರುವ ಸುಪ್ರೀಂಕೋರ್ಟ್, ಅಂತಹ ವ್ಯಕ್ತಿಗಳನ್ನು ನೇಣುಗಂಬಕ್ಕೆ ಏರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.' ವರದಕ್ಷಿಣೆಗಾಗಿ ವಧುವನ್ನು ಕೊಂದ ಪತಿ ಪ್ರೇಮ್ ಕುಮಾರ್ ಗುಲಾಟಿ ಹಾಗೂ ಅಣ್ಣ, ತಾಯಿ ಯಾರಿಗೂ ಕೂಡ ಈ ಪ್ರಕರಣದಲ್ಲಿ ಜಾಮೀನು ನೀಡುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿರುವ ದ್ವಿಸದಸ್ಯ ಪೀಠ, ವಿಚಾರಣೆಯನ್ನು ಮುಂದೂಡಿದೆ. ನಾವು ನಿಮಗೆ ಜಾಮೀನು ನೀಡುವುದಿಲ್ಲ, ನೀವು ಮತ್ತೊಂದು ಪೀಠಕ್ಕೆ ಮೇಲ್ಮನವಿ ಸಲ್ಲಿಸಿ ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಜಾಮೀನು ದೊರೆಯಬಹುದು ಎಂದು ನ್ಯಾಯಪೀಠ ತಿಳಿಸಿದೆ. |