ತನ್ನ ಮೇಲೆ ಹೊರಿಸಲಾಗಿರುವ ಎಲ್ಲಾ ಆರೋಪಗಳನ್ನು ತಾನು ಒಪ್ಪಿಕೊಳ್ಳಲು ಇಚ್ಛಿಸುತ್ತೇನೆ ಎಂಬುದಾಗಿ ನರಹಂತಕ ಉಗ್ರ ಅಜ್ಮಲ್ ಅಮೀರ್ ಕಸಬ್ ಶುಕ್ರವಾರ ವಿಶೇಷ ನ್ಯಾಯಾಧೀಶರ ಮುಂದೆ ಹೇಳಿದ್ದಾನೆ. ಈ ಕುರಿತು ತನ್ನ ವಕೀಲರೊಂದಿಗೆ ಚರ್ಚಿಸಿ ಬಳಿಕ ನ್ಯಾಯಾಲಯಕ್ಕೆ ತಿಳಿಸುವಂತೆ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಕಸಬ್ಗೆ ಸೂಚಿಸಿದ್ದಾರೆ.
ಜುಲೈ 20ರಂದು ಕಸಬ್ ಎಕಾಏಕಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದ. ಆದರೆ ಆತ ಪಾಕಿಸ್ತಾನದಿಂದ ಹೊರಟು ಮುಂಬೈ ತಲುಪಿ ದಾಳಿ ನಡೆಸಿದ ಕುರಿತು ಎಳೆಎಳೆಯಾಗಿ ವಿವರಿಸಿದ್ದರೂ, ತನ್ನ ಮೇಲಿನ ಕೆಲವು ಆರೋಪಗಳನ್ನು ಮಾತ್ರ ಒಪ್ಪಿಕೊಂಡಿದ್ದ. ನ್ಯಾಯಾಲಯವು ಆತನ ಅರೆವಾಶಿ ತಪ್ಪೊಪ್ಪಿಗೆಯನ್ನು ಸ್ವೀಕರಿಸಿದ್ದು, ವಿಚಾರಣೆಯನ್ನು ಮುಂದುವರಿಸಲು ನಿರ್ಧರಿಸಿತ್ತು.
"ಮೈ ಸಬ್ ಕಬೂಲ್ ಕರ್ನಾ ಚಾಹ್ತಾ ಹೂಂ (ಎಲ್ಲಾ ತಪ್ಪುಗಳನ್ನು ಒಪ್ಪಿಗೊಳ್ಳಲು ಇಚ್ಛಿಸುತ್ತೇನೆ)" ಎಂದು ಕಸಬ್ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪಣಿ ತಜ್ಞರೊಬ್ಬರನ್ನು ನ್ಯಾಯಾಲಯದಲ್ಲಿ ಸಾಕ್ಷಿಧಾರರಾಗಿ ಪರೀಕ್ಷಿಸುತ್ತಿರುವ ವೇಳೆಗೆ ಕಸಬ್ ತಾನು ಎಲ್ಲಾ ಆರೋಪಗಳನ್ನು ಒಪ್ಪಿಕೊಳ್ಳುವುದಾಗಿ ನುಡಿದರು.
"ಅಚಾನಕ್ ಕ್ಯಾಹುವಾ? ಐಸೆ ಕ್ಯೂನ್ ಕರ್ ರಹೆ ಹೋ?(ಇದ್ದಕ್ಕಿದ್ದಂತೆ ಏನಾಯ್ತು? ಯಾಕೆ ತಪ್ಪೊಪ್ಪಿಕೊಳ್ತಿಯಾ) ಎಂದು ನ್ಯಾಯಾಧೀಶರು ಕೇಳಿದರು. ನಿನ್ನ ವಿರುದ್ಧವಿರುವ ಆರೋಪಗಳು ಯಾವುವು ಎಂಬುದಾಗಿ ಯಾರಾದರೂ ನಿಂಗೆ ವಿವರಿಸಿದ್ದಾರೆಯೇ? ಈ ಹಿಂದೆ ನೀನು ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿರಲಿಲ್ಲ, ಕೆಲವನ್ನು ಮಾತ್ರ ಒಪ್ಪಿಕೊಂಡಿದ್ದೆ ಎಂಬುದಾಗಿ ಕಸಬ್ನನ್ನು ನ್ಯಾಯಾಧೀಶರು.
ಎರಡು ದಿನಗಳ ಹಿಂದೆ ತನಗೆ ಮಟನ್ ಬಿರಿಯಾಣಿ ಬೇಕು ಎಂದು ಜೈಲಿನಲ್ಲಿ ಊಟದ ಬಟ್ಟಲನ್ನು ಎಸೆದು ಹಲ್ಲಾಗುಲ್ಲಾ ಎಬ್ಪಿಸಿದ್ದ ಕಸಬ್, ನ್ಯಾಯಾಲಯದಲ್ಲಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಒಪ್ಪಿಕೊಳ್ಳುವ ವೇಳೆ ಶಾಂತನಾಗಿ ಕಂಡುಬರುತ್ತಿದ್ದ.