ಸರ್ಕಾರದ ಕಬ್ಬಿನ ಬೆಲೆ ನಿರ್ಧಾರ ನೀತಿಯನ್ನು ವಿರೋಧಿಸಿ ಲೋಕಸಭೆಯಲ್ಲಿ ಎಲ್ಲಾ ವಿರೋಧಪಕ್ಷಗಳು ಒಂದಾಗಿ ಪ್ರತಿಭಟನೆ ನಡೆಸಿದ್ದು, ಉಂಟಾದ ಕೋಲಾಹಲದ ಹಿನ್ನೆಲೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದ ಅಧಿವೇಶನಕ್ಕೆ ಆರಂಭದಲ್ಲೇ ವಿಘ್ನ ಉಂಟಾಗಿದ್ದು, ಅಧಿವೇಶನದ ಮುಂದೂಡಿಕೆಗೆ ಕಾರಣವಾಯಿತು.
ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ನೇತೃತ್ವದಲ್ಲಿ ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ಮೀರಾ ಕುಮಾರ್ ಅವರ ಸೀಟಿನ ಬಳಿ ಜಮಾಯಿಸಿ ಕಬ್ಬಿನ ಬೆಲೆ ನಿರ್ಧಾರ ನೀತಿಯನ್ನು ಹಿಂತೆಗೆಯುವಂತೆ ಒಕ್ಕೊರಲಿನಿಂದ ಒತ್ತಾಯಿಸಿದಾಗ ಗಲಭೆ ಉಂಟಾಗಿದ್ದು, ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು. ಬಳಿಕ ಸಮಾವೇಶಗೊಂಡಾಗಲೂ ರೈತರಿಗೆ ಅನ್ಯಾಯವಾಗುತ್ತಿರುವ ಈ ನೀತಿಯನ್ನು ಹಿಂತೆಗೆಯಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದ ಕಾರಣ ಅಧಿವೇಶನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಸಮಾಜವಾದಿ ಪಕ್ಷದ ಮುಲಾಯಂ ಹಾಗೂ ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್ ಅವರು ಪ್ರತಿಭಟನೆ ಆರಂಭಿಸಿದಾಗ ಭಾರತೀಯ ಜನತಾಪಾರ್ಟಿ, ಸಿಪಿಐ-ಎಂ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಪ್ರತಿಭಟನೆಯಲ್ಲಿ ಸೇರಿಕೊಂಡವು.