ಉತ್ತರ ಭಾರತದಲ್ಲಿ ತೀವ್ರ ಚಳಿ; ಬಲಿಯಾದವರ ಸಂಖ್ಯೆ 100ಕ್ಕೆ
ನವದೆಹಲಿ, ಸೋಮವಾರ, 4 ಜನವರಿ 2010( 13:38 IST )
ಕಳೆದ ಕೆಲವು ದಿನಗಳಿಂದ ಉತ್ತರ ಭಾರತಕ್ಕೆ ಚಳಿ ಮಾರಣಾಂತಿಕವಾಗುತ್ತಿದ್ದು, ಇದುವರೆಗೆ ಕನಿಷ್ಠ 100 ಮಂದಿ ಬಲಿಯಾಗಿದ್ದಾರೆ. ತೀವ್ರವಾಗಿ ಸುರಿಯುತ್ತಿರುವ ಮಂಜು ಮತ್ತು ಕೆಲವೆಡೆ ಮಳೆಯೂ ಬಂದ ಹಿನ್ನೆಲೆಯಲ್ಲಿ ತಾಪಮಾನ ತೀವ್ರವಾಗಿ ಕುಸಿದಿದ್ದು, ಜನತೆ ಕುಳಿತಲ್ಲೇ ಮರಗಟ್ಟಿ ಸಾಯುವ ಪ್ರಕರಣಗಳು ಹೆಚ್ಚುತ್ತಿವೆ.
ದೇಶದಲ್ಲೇ ಅತೀ ಹೆಚ್ಚಿನ ಚಳಿ ಬಾಧೆಗೊಳಗಾಗಿರುವುದು ಉತ್ತರ ಪ್ರದೇಶ. ಇಲ್ಲಿ ಕನಿಷ್ಠ 74 ಮಂದಿ ಸಾವನ್ನಪ್ಪಿದ ವರದಿಗಳು ಬಂದಿವೆ. ಉಳಿದಂತೆ ಜಾರ್ಖಂಡ್, ಜಮ್ಮು-ಕಾಶ್ಮೀರ ಮತ್ತು ಪಂಜಾಬ್ಗಳಲ್ಲೂ ಹಲವು ಸಾವಿನ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ 16 ಮಂದಿ ದೇಹ ತ್ಯಜಿಸಿದ್ದಾರೆ.
ಶಿಮ್ಲಾದಲ್ಲಿ ಈ ಅವಧಿಯ ಮೊತ್ತ ಮೊದಲ ಮಂಜು ಸುರಿದಿದೆ. ಭಾನುವಾರ ಸಂಜೆ ಹೊತ್ತಿಗೆ ಇದು ದಾಖಲೆಯ 10 ಸೆಂಟಿಮೀಟರುಗಳನ್ನು ತಲುಪಿತ್ತು. ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಮಂಜು ಸುರಿಯುವಿಕೆ ಮುಂದುವರಿಯಲಿದೆ.
ಶ್ರೀನಗರದಲ್ಲಿ ಭಾನುವಾರ ಕನಿಷ್ಠ -1.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದೇಶದ ಇತರ ಕೆಲವೆಡೆಯೂ ಕನಿಷ್ಠ ಉಷ್ಣಾಂಶ ದಾಖಲಾಗಿರುವ ವರದಿಗಳು ಬಂದಿದ್ದು, ಅಮೃತಸರ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಪ್ರಸಕ್ತ ದಾಖಲಿಸಿದೆ.
ಅದೇ ಹೊತ್ತಿಗೆ ದೆಹಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಭಾನುವಾರ ಮಳೆ ಸುರಿದಿದ್ದು, ಗರಿಷ್ಠ ಉಷ್ಣಾಂಶ ಕುಸಿತ ಕಂಡಿದೆ.
ದೆಹಲಿ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ದಟ್ಟ ಮಂಜಿನ ಕಾರಣ ಈಗಾಗಲೇ ಹಲವು ರೈಲು ಅಪಘಾತಗಳು ಸಂಭವಿಸಿವೆ. ಹಲವು ರೈಲುಗಳು ಹಾಗೂ ಅಂತಾರಾಷ್ಟ್ರೀಯ ವಿಮಾನಯಾನಗಳನ್ನೂ ರದ್ದುಗೊಳಿಸಲಾಗಿದೆ. ರಸ್ತೆ ಸಂಚಾರಕ್ಕೂ ಅಡ್ಡಿಯಾಗುವಷ್ಟು ಗಾಢವಾಗಿದೆ ಮಂಜು ಎಂದು ವರದಿಗಳು ಹೇಳಿವೆ.