ಬಿಹಾರ ಮತ್ತು ಕೊಲ್ಕತ್ತಾದಂತಹ ಮೆಟ್ರೋಪಾಲಿಟನ್ ನಗರಗಳಿಗೆ ತಾಲಿಬಾನ್ ತರಬೇತಿ ಪಡೆದುಕೊಂಡಿರುವ ಆತ್ಮಹತ್ಯಾ ಬಾಂಬರುಗಳು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಪೂರ್ವ ರೈಲ್ವೇ ವಲಯಗಳಿಗೆ ಎಚ್ಚರಿಕೆ ರವಾನಿಸಲಾಗಿದೆ.
ಬಿಹಾರ ಮತ್ತು ಮೆಟ್ರೋಪಾಲಿಟನ್ ನಗರಗಳಾದ ಕೊಲ್ಕತ್ತಾ ಮತ್ತಿತರೆಡೆ ಆತ್ಮಹತ್ಯಾ ಬಾಂಬರುಗಳ ತಂಡ ನುಸುಳಿದೆ ಎಂಬ ಮಾಹಿತಿಯನ್ನು ಪೂರ್ವ ಕೇಂದ್ರೀಯ ರೈಲ್ವೇ ಸುರಕ್ಷತಾ ಪಡೆಯ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಆರ್.ಕೆ. ಸಿನ್ಹಾ ಅವರು ಬಿಹಾರ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸಿದ್ದಾರೆ.
ತಾಲಿಬಾನ್ ತರಬೇತಿ ಪಡೆದುಕೊಂಡಿರುವ ತಂಡಗಳಿಂದ ಸಂಭವನೀಯ ದಾಳಿಗಳು ನಡೆಯುವ ಭೀತಿಯಿರುವುದರಿಂದ ಪ್ರಮುಖ ಭದ್ರತಾ ತಪಾಸನೆಗಳನ್ನು ನಡೆಸುವಂತೆ ಮತ್ತು ಹೆಚ್ಚಿನ ಮುತುವರ್ಜಿವಹಿಸುವಂತೆ ನಮಗೆ ಎಚ್ಚರಿಕೆ ನೀಡಲಾಗಿದೆ ಎಂದು ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾ, ಭೋಜಪುರ್, ಬಕ್ಸಾರ್, ಜೆಹನಾಬಾದ್, ನಾವಡಾ, ಗಯಾ, ನಳಂದಾ, ಲಖೀಸರಾಯ್, ಜಮೈ ಮತ್ತು ಬೇಗುಸರಾಯ್ ಮುಂತಾದ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಚ್ಚರಿಕೆ ಪತ್ರ ರವಾನಿಸಲಾಗಿದೆ.
ಕಳೆದ ವಾರವಷ್ಟೇ ಬಿಹಾರ ಪೊಲೀಸರಿಗೆ ಎಚ್ಚರಿಕೆ ರವಾನಿಸಿದ್ದ ಗುಪ್ತಚರ ಇಲಾಖೆ, ನೇಪಾಳದಲ್ಲಿ ತರಬೇತಿ ಪಡೆದಿರುವ ಭಯೋತ್ಪಾದಕರು ಭಾರತ ಪ್ರವೇಶಿಸಿದ್ದಾರೆ ಎಂದಿತ್ತು. ರಾಜ್ಯದಾದ್ಯಂತ ಈ ಕಟ್ಟೆಚ್ಚರವನ್ನು ರವಾನಿಸಲಾಗಿತ್ತು.
ಕೇರಳ ರೈಲುಗಳಿಗೂ ಬಾಂಬ್ ಬೆದರಿಕೆ... ನಿನ್ನೆಯಷ್ಟೇ ಕೇರಳಕ್ಕೆ ಹೋಗುವ ರೈಲುಗಳನ್ನು ಸ್ಫೋಟಿಸಲಾಗುವುದು ಎಂಬ ಅನಾಮಿಕ ಬೆದರಿಕೆಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೇ ವಲಯವು ಕಟ್ಟೆಚ್ಚರ ರವಾನಿಸಿತ್ತಲ್ಲದೆ, ಹೆಚ್ಚಿನ ತಪಾಸನೆಗಳನ್ನು ಕೈಗೊಂಡಿತ್ತು. ಆದರೆ ಯಾವುದೇ ರೈಲಿನಲ್ಲಿ ಬಾಂಬ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೇರಳ ಪೊಲೀಸರಿಗೆ ಕರೆ ಮಾಡಿದ ಈ ವ್ಯಕ್ತಿಯನ್ನು ಮೊಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ.
ಕೇರಳದಿಂದ ತಮಿಳುನಾಡಿಗೆ ಹೋಗುವ ರೈಲುಗಳನ್ನು ಕೂಡ ತಡೆ ಹಿಡಿದು ತಪಾಸನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.