ಶವ ಮಹಜರು ಮಾಡಲು ಮುಂದಾದ ಸಂದರ್ಭದಲ್ಲಿ ಸತ್ತ ವ್ಯಕ್ತಿಯೊಬ್ಬ ಎದ್ದು ಕುಳಿತು ವೈದ್ಯರನ್ನು ಬೇಸ್ತು ಬೀಳಿಸಿದ ಅಪರೂಪದ ಪ್ರಸಂಗವೊಂದು ಒರಿಸ್ಸಾದಿಂದ ವರದಿಯಾಗಿದೆ.
ಇಲ್ಲಿನ ಜೈಪುರ ಜಿಲ್ಲೆಯ ಬರಾಗಾಡಿಯಾ ಎಂಬ ಗ್ರಾಮದಲ್ಲಿ ಡಿಸೆಂಬರ್ 25ರಂದು ಮಾನಸ್ ದೇವ್ ಎಂಬಾತನಿಗೆ ವಾಹನವೊಂದು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ. ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ಆತನ ಪತ್ನಿ ಟಿಕಿ ದೇವ್ ಹೇಳಿದ್ದಾರೆಂದು ಒರಿಯಾ ಪತ್ರಿಕೆ 'ಸಾಂಬದ್' ವರದಿ ಮಾಡಿದೆ.
ಇಲ್ಲಿನ ಸ್ಥಳೀಯ ಆಸ್ಪತ್ರೆಯ ವೈದ್ಯರು ಮಾನಸ್ನನ್ನು ಪರೀಕ್ಷಿಸಿ ಸತ್ತಿದ್ದಾನೆ ಎಂದು ಘೋಷಿಸಿದರು. ಆದರೆ ಸ್ವಲ್ಪವೇ ಹೊತ್ತಿನಲ್ಲಿ ಪೋಸ್ಟ್ ಮಾರ್ಟಂ ಮಾಡಲು ಮುಂದಾದಾಗ ಆತ ಎದ್ದು ಕುಳಿತಿದ್ದಾನೆ.
ಶವ ಮಹಜರು ನಡೆಸಲು ವೈದ್ಯರು ಮುಂದಾಗುತ್ತಿದ್ದಂತೆ ಮಾನಸ್ ಎದ್ದು ಕುಳಿತದ್ದನ್ನು ಕಂಡು ಆತನ ಕುಟುಂಬದ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ದಿಗ್ಮೂಢರಾದರು ಎಂದು ವರದಿ ಹೇಳಿದೆ.
ಇದು ವೈದ್ಯರ ನಿರ್ಲಕ್ಷ್ಯವೋ ಅಥವಾ ವೈದ್ಯರಿಗೆ ಸವಾಲೋ ಎಂಬುದು ಕೊನೆಗೂ ಪರಿಹಾರವಾಗಿಲ್ಲ. ಆದರೆ ಆಸ್ಪತ್ರೆಯನ್ನು ಬದಲಾಯಿಸುವ ಮೂಲಕ ವೈದ್ಯರ ಮೇಲಿನ ನಂಬಿಕೆಯನ್ನು ಆತನ ಕುಟುಂಬ ಕಳೆದುಕೊಂಡಿರುವುದು ಸತ್ಯ.
ಈಗ ಇಲ್ಲಿಂದ 26 ಕಿಲೋ ಮೀಟರ್ ದೂರದಲ್ಲಿರುವ ಕಟಕ್ ಆಸ್ಪತ್ರೆಗೆ ದಾಖಲಾಗಿರುವ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಗ್ಯ ಸುಧಾರಿಸುತ್ತಿದ್ದು, ಮುಂದಿನ 15 ದಿನಗಳಲ್ಲಿ ಆತ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ ಎಂದು ಕುಟುಂಬ ಹೇಳಿದೆ.