ತನ್ನ ಮನೆಯಿಂದ ಅಮೂಲ್ಯ ವಸ್ತುಗಳನ್ನು ಕದ್ದಿದ್ದಾನೆ ಎಂದು ಯಜಮಾನ ಪೊಲೀಸ್ ದೂರು ನೀಡಿದ್ದನ್ನು ಕಂಡು ಹೆದರಿದ ಬಡಪಾಯಿಯೊಬ್ಬ ತನ್ನದೇ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ.
ಇದು ನಡೆದಿರುವುದು ಒರಿಸ್ಸಾದ ಕಟಕ್ ನಗರದ ಮಧುಪಟ್ಟಣ ಎಂಬಲ್ಲಿ. ತನ್ನ ಯಜಮಾನನ ಮನೆಯಿಂದ ಕಳ್ಳತನದ ಆರೋಪ ಎದುರಿಸುತ್ತಿದ್ದ ರಾಜು ಮೊಹಾಂತಿ ಪೊಲೀಸರಿಗೆ ಹೆದರಿ ಶನಿವಾರ ರಾತ್ರಿ ತನ್ನ ನಾಲಿಗೆಯನ್ನು ಛೇದಿಸಿಕೊಂಡಿದ್ದಾನೆ.
ತನ್ನ ಮನೆಯಿಂದ ಕೆಲವು ಅಮೂಲ್ಯ ವಸ್ತುಗಳು ಕಾಣೆಯಾಗಿವೆ ಎಂದು ಮನೆಯ ಯಜಮಾನ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ತನ್ನನ್ನು ಬಂಧಿಸಿ ಜೈಲಿಗೆ ಹಾಕಲು ಬರುತ್ತಿದ್ದಾರೆ ಎಂದು ಭೀತಿಗೊಂಡ ಆತ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಹರಿತವಾದ ಚೂರಿಯಿಂದ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಪೊಲೀಸರು ಮನೆಯ ಬಾಗಿಲನ್ನು ಒಡೆದು ನೋಡಿದಾಗ ರಾಜು ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣವೇ ಆತನನ್ನು ಇಲ್ಲಿನ ಎಸ್ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಒರಿಸ್ಸಾದಂತಹ ರಾಜ್ಯದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಕಳೆದ ವರ್ಷವಷ್ಟೇ ಮತ್ತೊಬ್ಬ ಯುವಕನೂ ಇದೇ ರೀತಿ ನಾಲಿಗೆಗೆ ಕತ್ತರಿ ಹಾಕಿದ್ದ. ಆದರೆ ಇದು ದೇವಿಯನ್ನು ಸಂತೃಪ್ತಗೊಳಿಸಲು.
2008ರ ಜುಲೈ ತಿಂಗಳಲ್ಲಿ ಅಶ್ವಿನಿ ಪಟೇಲ್ ಎಂಬ 25ರ ಯುವಕ ಬ್ಲೇಡಿನಿಂದ ತನ್ನ ನಾಲಿಗೆಯನ್ನು ಕತ್ತರಿಸಿ ದೇವಿಯ ಮೂರ್ತಿಯೆದುರು ಇಟ್ಟು ತನ್ನ ಭಕ್ತಿಯನ್ನು ಮೆರೆದಿದ್ದ.