ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಣಬ್ ಭಾಷಣಕ್ಕೆ ಕೇಂದ್ರ ಸಚಿವ ಮೊಯ್ಲಿ 'ತಲೆದೂಗಿದ್ದು' ಹೀಗೆ!
(Veerappa Moily | Price Rise | Pranab Mukherjee | Lok Sabha | Parliament)
ಪ್ರಣಬ್ ಭಾಷಣಕ್ಕೆ ಕೇಂದ್ರ ಸಚಿವ ಮೊಯ್ಲಿ 'ತಲೆದೂಗಿದ್ದು' ಹೀಗೆ!
ನವದೆಹಲಿ, ಗುರುವಾರ, 25 ಫೆಬ್ರವರಿ 2010( 17:07 IST )
PR
ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಬೆಲೆಯೇರಿಕೆ ಕುರಿತು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಏನೂ ಆಗದಂತೆ ನಗುತ್ತಿದ್ದರೆ, ಪ್ರಣಬ್ ಮುಖರ್ಜಿ ಭಾಷಣ ಮಾಡುತ್ತಿದ್ದಾಗ ನಮ್ಮ ಕರ್ನಾಟಕದವರೇ ಆದ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಏನು ಮಾಡುತ್ತಿದ್ದರು? ಬೆಲೆ ಏರಿಕೆ, ಮುಂದಿನ ಸಾಮಾನ್ಯ ಬಜೆಟ್ ಕುರಿತಾಗಿ ವಿತ್ತ ಸಚಿವರು ಗಂಭೀರವಾಗಿ ವಿವರಿಸುತ್ತಿದ್ದರೆ ಕಾನೂನು ಸಚಿವರು ಗಂಭೀರವಾಗಿಯೇ ತೂಕಡಿಸುತ್ತಿದ್ದರು!
ರಾಜಕಾರಣಿಗಳ ಇಂತಹ ವರ್ತನೆಗಳು ಪ್ರಜೆಗಳಿಗೆ ಹೊಸತಲ್ಲವಾದರೂ, ಪ್ರಮುಖ ವಿಚಾರಗಳ ಕುರಿತು ಲೋಕಸಭೆಯಲ್ಲಿ ವಿವರಣೆಗಳನ್ನು ನೀಡುತ್ತಿರುವಾಗ ಮೊಯ್ಲಿಯವರು ನಿದ್ದೆಗೆ ಶರಣಾಗಿದ್ದು ಹಲವರಿಗೆ ಮುಜುಗರ ತಂದಿತು. ಮತ್ತು ಹಲವರಿಗೆ ಇದು, ಕೇಂದ್ರದಲ್ಲಿ ನಾಲ್ಕು ಮಂದಿ ಸಚಿವರಿದ್ದರೂ ರಾಜ್ಯದ ಜನತೆಯ ಧ್ವನಿ ಜೋರಾಗಿ ಯಾಕೆ ಕೇಳುತ್ತಿಲ್ಲ ಎಂಬುದಕ್ಕೆ ಉತ್ತರವಾಗಿಯೂ ಗೋಚರಿಸಿತು.
2010-11ರ ಸಾಲಿನ ಮುಂಗಡ ಪತ್ರ ಮತ್ತು ಬಿಜೆಪಿ ಆರೋಪಗಳಿಗೆ ಉತ್ತರಿಸುತ್ತಿದ್ದ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರು, ಅಂಕಿ-ಅಂಶಗಳನ್ನು ವಿವರಿಸುತ್ತಿದ್ದರು.
ಆದರೆ ಅವರ ಹಿಂದೆಯೇ ಕುಳಿತಿದ್ದ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿಯವರು ಮುಖರ್ಜಿಯವರ ಭಾಷಣಕ್ಕೆ ತಲೆಕೆಡಿಸಿಕೊಳ್ಳದೆ, ನಿದ್ರಾದೇವಿಯ ಕರೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಅವರು ತೂಕಡಿಸುತ್ತಿದ್ದುದು ಲೋಕಸಭೆಯ ನೇರಪ್ರಸಾರದ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು.
ಅಂದ ಹಾಗೆ ಸೋಮವಾರ ಆರಂಭವಾಗಿರುವ ಬಜೆಟ್ ಅಧಿವೇಶನದ ಮೂರನೇ ದಿನವಾದ ಇಂದು ಮೊಯ್ಲಿ ಮಾತ್ರವೇ ಅಲ್ಲ, ಅವರ ಜತೆ ಇನ್ನಿತರೆ ಹಲವು ಸಂಸದರು ಕೂಡ ತೂಕಡಿಸುತ್ತಿದ್ದರು. ಪ್ರಣಬ್ ಭಾಷಣಕ್ಕೆ ಅಲ್ಲೊಬ್ಬರು ಇಲ್ಲೊಬ್ಬರು ಮೇಜು ಕುಟ್ಟುವಾಗ ಪಕ್ಕನೆ ಎಚ್ಚರಗೊಳ್ಳುತ್ತಿದ್ದುದು ಗಮನ ಸೆಳೆಯುತ್ತಿತ್ತು.