ಬಾಬ್ರಿ ಮಸೀದಿ ಧ್ವಂಸದ ದಿನ ಎಲ್.ಕೆ. ಅಡ್ವಾಣಿ ಯಾವುದೇ ಭಾಷಣವನ್ನು ಮಾಡಿಲ್ಲ, ಹಿರಿಯ ಐಪಿಎಸ್ ಅಧಿಕಾರಿ ಅಂಜು ಗುಪ್ತಾ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಬಿಜೆಪಿ ಹೇಳಿಕೊಂಡಿದೆ.
ಮಸೀದಿ ಧ್ವಂಸ ದಿನದಂದು (1992 ಡಿಸೆಂಬರ್ 6) ನಾನು ಸ್ಥಳದಲ್ಲಿಯೇ ಇದ್ದೆ. ನನ್ನ ಪ್ರಕಾರ ಅಡ್ವಾಣಿ ಅಥವಾ ಮುರಳಿ ಮನೋಹರ ಜೋಷಿಯವರು ಆ ದಿನ ಯಾವುದೇ ಭಾಷಣವನ್ನು ಮಾಡಿಲ್ಲ. ಗುಪ್ತಾ ಅವರು ನೀಡಿರುವ ಹೇಳಿಕೆ ಪೂರ್ವಗ್ರಹ ಪೀಡಿತವಾಗಿದ್ದು, ಪಕ್ಷಪಾತ ಮತ್ತು ಸುಳ್ಳಿನಿಂದ ಕೂಡಿದೆ ಎಂದು ಬಿಜೆಪಿ ಉಪಾಧ್ಯಕ್ಷ ಕಲ್ರಾಜ್ ಮಿಶ್ರಾ ಹೇಳಿದ್ದಾರೆ.
ಮಸೀದಿ ಧ್ವಂಸಕ್ಕೂ ಮೊದಲು ಅಯೋಧ್ಯೆಯಲ್ಲಿ ಬಿಜೆಪಿ ನಾಯಕ ಅಡ್ವಾಣಿ ಪ್ರಚೋದನಾಕಾರಿ ಭಾಷಣವನ್ನು ಮಾಡಿದ್ದರು ಎಂದು 1992ರಲ್ಲಿ ಅಡ್ವಾಣಿಯವರ ಭದ್ರತಾ ಅಧಿಕಾರಿಯಾಗಿದ್ದ ಗುಪ್ತಾ ಶುಕ್ರವಾರ ರಾಯ್ ಬರೇಲಿಯಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು.
1992ರ ಡಿಸೆಂಬರ್ 6ರಂದು ಅಡ್ವಾಣಿಯವರು ಮಸೀದಿಯಿಂದ 150-200 ಮೀಟರ್ ದೂರದಲ್ಲಿದ್ದ ರಾಮ್ ಕಥಾ ಕುಂಜ್ ಮಂಚ್ನಿಂದ ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಜನತೆಯನ್ನು ಹುಚ್ಚೆಬ್ಬಿಸಿದ್ದರು. ಮಸೀದಿ ಇರುವ ಸ್ಥಳದಲ್ಲಿ ದೇವಸ್ಥಾನ ಕಟ್ಟಲೇಬೇಕು ಎಂದು ಅವರು ಮತ್ತೆ ಮತ್ತೆ ಹೇಳುತ್ತಿದ್ದರು ಎಂದು ಗುಪ್ತಾ ನ್ಯಾಯಾಲಯಕ್ಕೆ ತಿಳಿಸಿದ್ದರು.
ಅಲ್ಲದೆ ಮಸೀದಿ ಧ್ವಂಸಗೈಯುತ್ತಿದ್ದ ಕರಸೇವಕರನ್ನು ಯಾವುದೇ ಬಿಜೆಪಿ ನಾಯಕರು ತಡೆಯುವ ಯತ್ನವನ್ನು ಮಾಡಿರಲಿಲ್ಲ ಎಂದೂ ಗುಪ್ತಾ ಹೇಳಿದ್ದರು.
ಐಪಿಎಸ್ ಅಧಿಕಾರಿಯ ಹೇಳಿಕೆಯನ್ನು ತಳ್ಳಿ ಹಾಕಿರುವ ಮಿಶ್ರಾ, ಕಟ್ಟಡ ಧ್ವಂಸವಾಗುತ್ತಿರುವ ಸಂದರ್ಭದಲ್ಲಿ ಎಲ್ಲಾ ನಾಯಕರೂ ಸ್ಥಳದಲ್ಲಿದ್ದರು ಮತ್ತು ಜನರನ್ನು ತಡೆಯಲು ಮತ್ತು ವಾಪಸ್ ಕರೆಸಲು ಯತ್ನಿಸಿದ್ದರು ಎಂದಿದ್ದಾರೆ.
ಜನ ಮಸೀದಿಯನ್ನು ಧ್ವಂಸ ಮಾಡಬಾರದು, ದಯವಿಟ್ಟು ವಾಪಸ್ ಬನ್ನಿ ಎಂದು ಸತತ ಮನವಿಯನ್ನು ಮಾಡಿಕೊಂಡಿದ್ದೆವು. ನಾವು ಅಲ್ಲಿಗೆ ಹೋಗಿದ್ದು ದೇವಸ್ಥಾನ ನಿರ್ಮಿಸಲು. ಯಾವುದೇ ಕಟ್ಟಡವನ್ನು ಧ್ವಂಸಗೊಳಿಸಲು ಅಲ್ಲ ಎಂದು ಮಿಶ್ರಾ ವಿವರಣೆ ನೀಡಿದ್ದಾರೆ.