ಸಂಯುಕ್ತ ರಂಗದ ಸರಕಾರದಲ್ಲಿ ತಾನು ವಿತ್ತ ಸಚಿವನಾಗಿದ್ದಾಗ ಬಜೆಟ್ ಓದಿ ಹೇಳುತ್ತಿದ್ದ ಸಂದರ್ಭದಲ್ಲಿ ಆಗಿನ ಪ್ರಧಾನಿ ಎಚ್.ಡಿ. ದೇವೇಗೌಡರು ನಿದ್ದೆ ಮಾಡುತ್ತಿದ್ದುದು ನನಗೆ ಈಗಲೂ ನೆನಪಿದೆ, ಅವರಿಗೆ ನಿದ್ದೆಯೆಂದರೆ ಅಪಾರ ಪ್ರೀತಿ ಎಂದು ಗೃಹ ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.
'ಬಿಸಿನೆಸ್ ಸ್ಟ್ಯಾಂಡರ್ಡ್' ಪತ್ರಿಕೆಯ ಜತೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಚಿದಂಬರಂ ಹಳೆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಹಲವು ಅಪರೂಪದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
PTI
ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡದ್ದನ್ನು ಪ್ರತಿಭಟಿಸಿದ್ದ ಚಿದಂಬರಂ, 1996ರಲ್ಲಿ ಮೂಪನಾರ್ ಅವರ 'ತಮಿಳು ಮಾನಿಲ ಕಾಂಗ್ರೆಸ್' (ಟಿಎಂಸಿ) ಸೇರಿದ್ದರು. ಆ ಚುನಾವಣೆಯಲ್ಲಿ (1996) ಸಾಕಷ್ಟು ಸ್ಥಾನಗಳನ್ನು ಗೆದ್ದಿದ್ದ ಟಿಎಂಸಿ ನೆರವಿನಿಂದ ಸಂಯುಕ್ತ ರಂಗದ ಸರಕಾರ ಅಧಿಕಾರಕ್ಕೆ ಬಂದಿತ್ತು. ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದ ಈ ಸರಕಾರದಲ್ಲಿ ಚಿದಂಬರಂ ವಿತ್ತ ಸಚಿವರಾಗಿದ್ದರು.
ಆ ದಿನಗಳ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡುತ್ತಿದ್ದ ಚಿದಂಬರಂ, 'ಅವು ನಮ್ಮ ಅತ್ಯುತ್ತಮ ದಿನಗಳು. ಸಂಯುಕ್ತ ರಂಗದಲ್ಲಿ ನಮ್ಮನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ. ಸರಕಾರವು ಪತನವಾಗುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿತ್ತು. ಆದರೆ ಅದುವರೆಗೆ ನಾವು ಏನನ್ನು ಬಯಸುತ್ತೇವೋ ಅದನ್ನು ಮಾಡಬಹುದಿತ್ತು. 1997ರ ಆಯವ್ಯಯ ಪಟ್ಟಿಯಲ್ಲಿ (ಬಜೆಟ್) ನಾನು ಬಡ್ಡಿ ದರಗಳನ್ನು ಕಡಿತಗೊಳಿಸಿದ್ದೆ. ವಿದೇಶಿ ನೇರ ಬಂಡವಾಳವನ್ನು ಮುಕ್ತವಾಗಿಸಿ, ಬಂಡವಾಳ ಹಿಂತೆಗೆತಕ್ಕೆ ಒತ್ತು ನೀಡಿದ್ದೆ. ಆಗ ಎಚ್.ಡಿ. ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು' ಎಂದಿದ್ದಾರೆ.
ಅವರು ನಿದ್ದೆಯನ್ನು ಅತಿಯಾಗಿ ಹಚ್ಚಿಕೊಂಡಿದ್ದರು. ನಾನು ಬಜೆಟ್ ಓದುತ್ತಿರುವಾಗಲೂ ಗೌಡರು ನಿದ್ದೆ ಮಾಡುತ್ತಿದ್ದುದು ನನಗೆ ಈಗಲೂ ಸರಿಯಾಗಿ ನೆನಪಿದೆ. ಅವರ ಪಕ್ಕದಲ್ಲೇ ಅವರ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ನಿಂತಿದ್ದರೂ, ಗೌಡರು ನಿದ್ದೆಗೆ ಶರಣಾಗಿದ್ದರು ಎಂದು ಚಿದಂಬರಂ ತಿಳಿಸಿದ್ದಾರೆ.
ಅವರ ಚಿಂತೆ ಏನಿದ್ದರೂ ಅದು ರೈತರ ಬಗ್ಗೆ ಮಾತ್ರ. ನಾನು ಬಜೆಟ್ ಓದುತ್ತಿರುವಾಗ ಅಲ್ಲಿ ರೈತರ ಕುರಿತ ಯಾವುದೇ ಪ್ರಸ್ತಾಪವಿದ್ದರೂ ಕಣ್ಣು ಮಿಟುಕಿಸುತ್ತಿದ್ದರು ಎಂದು ಹಳೆಯ ದಿನಗಳನ್ನು ಸಚಿವರು ಮೆಲುಕು ಹಾಕಿದರು.