ಹೌದು, ಸದಾ ತನ್ನನ್ನು ವೈಭವೀಕರಿಸಿಕೊಳ್ಳುತ್ತಾ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಮತ್ತೊಂದು ಮಜಲನ್ನು ತಲುಪುತ್ತಿದ್ದಾರೆ. ಬಹುಜನ ಸಮಾಜ ಪಕ್ಷದ ಅಧಿನಾಯಕಿಯ 'ಭಕ್ತ'ನೋರ್ವ ತಾನು ದೇವಸ್ಥಾನ ಕಟ್ಟಲು ಬಯಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.
ಬಂದೇಲ್ಖಂಡ್ನಲ್ಲಿನ ಮಹೋಬಾದ ಕನ್ಹಾಯ್ಲಾಲ್ ರಜಪೂತ್ ಎಂಬಾತನೇ ಇದೀಗ ಮಾಯಾವತಿಯವರಿಗೆ ದೇವಸ್ಥಾನ ನಿರ್ಮಿಸಿ ಅವರನ್ನು ದೇವತೆಯನ್ನಾಗಿ ಮಾಡಲು ಹೊರಟಿರುವುದು. ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯನ್ನೂ ಆತ ಕೇಳಿದ್ದಾನೆ.
ಮಹೋಬಾದದ ನಾಥ್ಪುರದಲ್ಲಿನ ನನ್ನ ಸ್ವಂತ ಜಮೀನಿನಲ್ಲಿ ಮಾಯಾವತಿಯವರ ದೇವಸ್ಥಾನ ಕಟ್ಟಲು ಅನುಮತಿ ನೀಡಬೇಕೆಂದು ಕೋರಿ ನಾನು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇನೆ. ಮಾಯಾವತಿಯವರ ಬೆಂಬಲಿಗರ ಸಹಕಾರದಿಂದ ದೇವಸ್ಥಾನ ನಿರ್ಮಾಣ ಮಾಡಲಾಗುತ್ತದೆ ಎಂದು ರಜಪೂತ್ ತಿಳಿಸಿದ್ದಾನೆ.
ಆದರೆ ಮಾಯಾವತಿಯವರ ಅನುಯಾಯಿಗಳು ಅವರ ದೇವಸ್ಥಾನದಲ್ಲಿನ ದೇವತೆಗೆ ಹಣವನ್ನು ಅರ್ಪಿಸುವುದು ಕಡ್ಡಾಯವಾಗಲಿದೆ ಎಂದೂ ರಜಪೂತ್ ಹೇಳಿದ್ದಾನೆ.
ವೃತ್ತಿಯಿಂದ ವಕೀಲನಾಗಿರುವ ಸ್ವಯಂಘೋಷಿತ ಬಿಎಸ್ಪಿ ಬೆಂಬಲಿಗನ ಪ್ರಕಾರ, 'ಮಾಯಾವತಿ ಬಡವರು ಮತ್ತು ತುಳಿತಕ್ಕೊಳಗಾದವರ ಪಾಲಿನ ದೇವರು'.
ಆದರೆ ದೇವಸ್ಥಾನ ಕಟ್ಟಲು ನಿರ್ದಿಷ್ಟವಾಗಿ ಯಾರು ಹಣ ನೀಡುತ್ತಾರೆ ಎಂಬುದು ನಿರ್ಧಾರವಾಗಿಲ್ಲ. ಬಹುತೇಕ ಪಕ್ಷದ ನಿಧಿಯನ್ನು ಇದಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಸ್ವತಃ ರಜಪೂತ್ ತಿಳಿಸಿದ್ದಾನೆ.
ದೇವಸ್ಥಾನ ನಿರ್ಮಾಣ ಮಾಡಲು ಅನುಮತಿ ನೀಡಬೇಕೆಂದು ರಜಪೂತ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾನೆ. ಈ ಸಂಬಂಧ ಮಹೋಬಾದ ಜಿಲ್ಲಾಧಿಕಾರಿ ಬಿ.ಬಿ. ಪಂತ್ ಅವರನ್ನು ಸಂಪರ್ಕಿಸಿದಾಗ, 'ಅಂತಹ ಯಾವುದೇ ಅರ್ಜಿಯನ್ನು ನಾನು ಇದುವರೆಗೆ ಸ್ವೀಕರಿಸಿಲ್ಲ. ಅರ್ಜಿ ಬಂದ ನಂತರ ಆ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ.
ತನ್ನದೇ ಸಾವಿರಾರು ಮೂರ್ತಿಗಳನ್ನು ರಾಜ್ಯದೆಲ್ಲೆಡೆ ಪ್ರತಿಷ್ಠಾಪಿಸಿದ ಬಳಿಕ ಕೋಟಿಗಟ್ಟಲೆ ಮೌಲ್ಯದ ನೋಟಿನ ಹಾರಗಳನ್ನು ಹಾಕಿಸಿಕೊಂಡು ಸುದ್ದಿ ಮಾಡಿರುವ ಮಾಯಾವತಿ ದಲಿತರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ.