ವಿಶೇಷ ತನಿಖಾ ದಳದ ವಿಚಾರಣೆಗೆ ಹಾಜರಾಗುವ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಕಾನೂನಿಗೆ ನಮ್ರತೆ ತೋರಿಸಿದ್ದಾರೆ ಎಂದು ಹೇಳುತ್ತಿರುವ ಬಿಜೆಪಿ ವಿರುದ್ಧ ತೀಕ್ಷ್ಣ ದಾಳಿ ನಡೆಸಿರುವ ಕಾಂಗ್ರೆಸ್, ನಾಳೆ ದಾವೂದ್ ಇಬ್ರಾಹಿಂನನ್ನು ಕಾನೂನಿನ ಕುಣಿಕೆಗೆ ತಂದು ಆತ ದೇಶದ ಕಾನೂನನ್ನು ಗೌರವಿಸಿದ್ದಾನೆ ಎಂದು ಹೇಳಿದಂತೆ ಇದು ಎಂದು ವ್ಯಂಗ್ಯವಾಡುವ ಮೂಲಕ ಇಬ್ಬರಿಗೆ ಪರೋಕ್ಷ ಹೋಲಿಕೆ ಮಾಡಿದೆ.
ನಾಳೆ ಒಂದು ವೇಳೆ ದಾವೂದ್ ಇಬ್ರಾಹಿಂನನ್ನು (1993ರ ಮುಂಬೈ ಸರಣಿ ಸ್ಫೋಟದ ಆರೋಪಿ) ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಸಾಧ್ಯವಾದರೆ ಆಗ 'ಆತ ನ್ಯಾಯಾಲಯದ ಎದುರು ಹಾಜರಾಗುವ ಮೂಲಕ ಭಾರತದ ನ್ಯಾಯಾಂಗಕ್ಕೆ ತಲೆ ಬಾಗಿದ್ದಾನೆ' ಎಂದು ಬಿಜೆಪಿ ಹೇಳಬಹುದು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ತಿಳಿಸಿದ್ದಾರೆ.
PR
ಗೋದ್ರಾ ಹತ್ಯಾಕಾಂಡದ ನಂತರದ ಹಿಂಸಾಚಾರದ ಕುರಿತು ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ದಳದ (ಸಿಟ್) ಎದುರು ಮೋದಿ ಹಾಜರಾಗುವ ಮೂಲಕ ನ್ಯಾಯಾಂಗಕ್ಕೆ ಗೌರವ ನೀಡಿದ್ದಾರೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿರುವುದು ಅದರ ತೀರಾ ಅಪಕ್ವತೆಯನ್ನು ಸೂಚಿಸುತ್ತದೆ ಎಂದಿರುವ ತಿವಾರಿ, ವಾಸ್ತವದಲ್ಲಿ ತಮ್ಮ ಆಡಳಿತಾತ್ಮಕ ಜವಾಬ್ದಾರಿಯನ್ನು ನಿರ್ವಹಿಸದೇ ಇದ್ದರೆ ಆತ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಮತ್ತೂ ಮಾತು ಮುಂದುವರಿಸಿದ ಕಾಂಗ್ರೆಸ್ ವಕ್ತಾರ, ಗುಜರಾತ್ ಸರಕಾರವು ಗೋದ್ರಾ ನಂತರದ ಹಿಂಸಾಚಾರದಲ್ಲಿ ಜನತೆಯನ್ನು ರಕ್ಷಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಿಡಿ ಕಾರಿದ್ದಾರೆ.
ಮೋದಿಯವರ ಸರಕಾರ ಈ ನರಮೇಧದಲ್ಲಿ ಪಾಲ್ಗೊಂಡಿತ್ತು ಎಂದೂ ಕೆಲ ಜನ ಹೇಳುತ್ತಾರೆ. ಹಾಗಾಗಿ ನೀವು ನಿಮ್ಮ ಆಡಳಿತಾತ್ಮಕ ಜವಾಬ್ದಾರಿಯಾಗಿರುವ 'ರಾಜಧರ್ಮ'ವನ್ನು ಪಾಲಿಸದೇ ಇದ್ದರೆ 'ರಾಜ ದಂಡ' ಶಿಕ್ಷೆಯನ್ನು ಅನುಭವಿಸಲೇಬೇಕು ಎಂದರು.
ಅದೇ ಹೊತ್ತಿಗೆ ಕಳೆದ ಒಂದು ವಾರದಿಂದ ತೀವ್ರ ವಿವಾದಕ್ಕೆ ತುತ್ತಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಗುಜರಾತ್ ಪ್ರಚಾರ ರಾಯಭಾರಿ ಅಮಿತಾಬ್ ಬಚ್ಚನ್ ಮತ್ತು ಅವರ ಸಹಕಾರಕ್ಕೆ ಬಂದಿರುವ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.