1947ರ ಸಂದರ್ಭದಲ್ಲಿ ದೇಶ ಇಬ್ಭಾಗವಾಗಲು ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್) ಮುಖಂಡ ವಿನಾಯಕ ದಾಮೋದರ್ 'ವೀರ್' ಸಾರ್ವಕರ್ ಸಮಾನ ಹೊಣೆಗಾರರು ಎಂದು ರಾಜ್ಯಸಭಾ ಸದಸ್ಯ ಮಣಿ ಶಂಕರ್ ಅಯ್ಯರ್ ಆರೋಪಿಸಿದ್ದಾರೆ.
ಅವರು ದೆಹಲಿಯ ಕಾಂಗ್ರೆಸ್ ಘಟಕದ ಸಮ್ಮೇಳನದಲ್ಲಿ ಆಯೋಜಿಸಿದ್ದ ಕೋಮು ಸೌಹಾರ್ದತೆ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ವಿಷಯದ ಕುರಿತು ಮಾತನಾಡಿದ ಮಾಜಿ ಸಚಿವ, ವೀರ ಸಾವರ್ಕರ್ ಅವರು ಮೊದಲಿನಿಂದಲೂ ದ್ವಿರಾಷ್ಟ್ರ ಸಿದ್ದಾಂತದ ಪರವಾಗಿಯೇ ಇದ್ದರು. ಹಾಗಾಗಿಯೇ ಅವರು ಹಿಂದೂರಾಷ್ಟ್ರವಾಗಲೇಬೇಕೆಂದು ಹಠ ಹಿಡಿದಿದ್ದರು. ಆ ಕಾರಣಕ್ಕಾಗಿಯೇ ಜಿನ್ನಾ ಅವರ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಬೆಂಬಲಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷ(ಬಿಜೆಪಿ) ಸಾವರ್ಕರ್ ಅವರ ಕೂಸುಗಳಾಗಿವೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಒಂದು ವೇಳೆ ಭಾರತ ಹಿಂದೂ ರಾಷ್ಟ್ರವಾಗಿ ರೂಪುಗೊಂಡಿದ್ದರೆ ಶೈವ ಮತ್ತು ವೈಷ್ಣವ ಪಂಥೀಯ ಘರ್ಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತಿತ್ತು. ಇದು ಪಾಕಿಸ್ತಾನದಲ್ಲಿನ ಶಿಯಾ ಮತ್ತು ಸುನ್ನಿ ಮುಸ್ಲಿಮರ ನಡುವಿನ ಘರ್ಷಣೆಯಂತೆಯೇ ನಡೆಯುತ್ತಿತ್ತು ಎಂದು ಅಯ್ಯರ್ ವ್ಯಾಖ್ಯಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮತ್ತೊಬ್ಬ ಅತಿಥಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ, ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದ್ದು, ಸಮಾಜದಲ್ಲಿನ ಎಲ್ಲಾ ವರ್ಗದ ಜನರು ಭಾರತೀಯರು ಹಾಗೂ ಎಲ್ಲರಿಗೂ ಸಮಾನತೆ ಎಂಬುದೇ ಕಾಂಗ್ರೆಸ್ ತತ್ವ ಎಂದರು.