ರಾಮಜನ್ಮ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ತೀರ್ಪನ್ನು ಗೌರವಿಸುವುದಾಗಿ ಭಾರತೀಯ ಜನತಾ ಪಕ್ಷ ಹೇಳಿದೆ. ಆದರೆ, ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಮಂದಿರವಿತ್ತು ಎಂಬುದನ್ನು ಪಕ್ಷ ಈಗಲೂ ಪ್ರತಿಪಾದಿಸುತ್ತದೆ ಎಂದು ಹೇಳಿದೆ.
ಸೆಪ್ಟೆಂಬರ್ 24ರಂದು ಅಯೋಧ್ಯೆ ಒಡೆತನದ ಕುರಿತು ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಈ ಹೇಳಿಕೆ ನೀಡಿದೆ.
ಅಲಹಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಕಲಾರಾಜ್ ಮಿಶ್ರಾ, ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ, ತನ್ನ ನಿಲುವಿಗೆ ಬಿಜೆಪಿ ಬದ್ಧವಿದೆ. ಆದರೂ ಬಿಜೆಪಿ ಈ ಪ್ರಕರಣದ ಕುರಿತಂತೆ ಅಲಹಾಬಾದ್ ನ್ಯಾಯಾಲಯದ ಲಖ್ನೋ ಪೀಠ ನೀಡುವ ತೀರ್ಪನ್ನು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ವಿವಾದಿತ ಪ್ರದೇಶದಲ್ಲಿ ಮಂದಿರ ಇರಲಿಲ್ಲ ಎಂದು ತೀರ್ಪು ಬಂದಲ್ಲಿ ಪಕ್ಷದ ನಿಲುವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಮಿಶ್ರಾ, ವಿವಾದಿತ ಸ್ಥಳದಲ್ಲಿ ಮಂದಿರ ಇದ್ದಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಂಡರು.