ಅಯೋಧ್ಯೆ ತೀರ್ಪು ರಾಮಮಂದಿರ ಪರವಾಗಿ ಬಂದಿರುವುದನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮರ್ಥನೆ ಎಂದುಕೊಳ್ಳಬೇಕಾಗಿಲ್ಲ ಎಂದು ಗೃಹಸಚಿವ ಪಿ. ಚಿದಂಬರಂ ಹೇಳಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಪ್ರಕರಣವು ನ್ಯಾಯಾಲಯದಲ್ಲಿರುವಾಗ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬಾರದು ಎಂದಿದೆ.
1992ರಲ್ಲಿ ಏನು ನಡೆದಿತ್ತೋ, ಅದರ ಬಗ್ಗೆ ಚಿದಂಬರಂ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲಾಗದು. ಪ್ರಕರಣವು ನ್ಯಾಯಾಲಯದಲ್ಲಿದೆ. ಹಾಗಾಗಿ ಅವರ ಯಾವುದೇ ನಿರ್ಧಾರಕ್ಕೆ ಬರಬಾರದು. ಅದನ್ನು ನ್ಯಾಯಾಲಯ ತೀರ್ಮಾನಿಸಲು ಬಿಡಿ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಘಟನೆ ಸಂಪೂರ್ಣವಾಗಿ ಅಸ್ವೀಕಾರಾರ್ಹವಾದುದು ಮತ್ತು ಕಾನೂನು ಸುವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಂಡು ಕೆಲವರು ಸೃಷ್ಟಿಸಿದ ಪ್ರಸಂಗ. ಅದೊಂದು ಕ್ರಿಮಿನಲ್ ಪ್ರಕರಣ ಮತ್ತು ಅದೇ ರೀತಿ ಅದು ಪರಿಗಣಿಸಲ್ಪಡುವುದು ಮುಂದುವರಿಯುತ್ತದೆ ಎಂದು ಚಿದಂಬರಂ ಹೇಳಿದ್ದರು.
ಅದೇ ಹೊತ್ತಿಗೆ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಒಡೆತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಮತ್ತು ಲೋಕ ಜನಶಕ್ತಿ ಪಕ್ಷದ ವರಿಷ್ಠ ರಾಮ್ ವಿಲಾಸ್ ಪಾಸ್ವಾನ್ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೂ ಬಿಜೆಪಿ ಖಾರ ಪ್ರತಿಕ್ರಿಯೆ ನೀಡಿದೆ.
ಅವರ ಹೇಳಿಕೆಗಳು ದುರದೃಷ್ಟಕರ ಎಂದಿರುವ ಜಾವಡೇಕರ್, ಸಮಾಜವು ಸಾಮರಸ್ಯವನ್ನು ಕಾಯ್ದುಕೊಂಡಿರುವ ಇಂತಹ ಹೊತ್ತಿನಲ್ಲಿ ಪ್ರಚೋದನಾಕಾರಿ ಹೇಳಿಕೆಗಳು ಸಲ್ಲದು. ಇಂತಹ ಹೇಳಿಕೆಗಳು ಸಮಾಜವನ್ನು ಪ್ರಕ್ಷ್ಯುಬ್ದಗೊಳಿಸಬಹುದು. ಇದರಿಂದ ತಮಗೆ ರಾಜಕೀಯ ಲಾಭವೂ ಆಗದು. ದಯವಿಟ್ಟು ಪ್ರಚೋದನೆಗೆ ಮುಂದಾಗಬೇಡಿ ಎಂದರು.
ನ್ಯಾಯಾಲಯದ ತೀರ್ಪಿನಿಂದ ಮುಸ್ಲಿಂ ಸಮುದಾಯವು ಮೋಸ ಹೋದ ಅನುಭವದಲ್ಲಿದೆ. ಮುಂದಿನ ದಿನಗಳಲ್ಲಿ ಇದು ಸಮಸ್ಯೆಗಳಿಗೆ ಕಾರಣವಾಗಬಹುದು. ನ್ಯಾಯಾಲಯವು ಸಾಕ್ಷಿ ಮತ್ತು ವಾಸ್ತವತೆಯನ್ನು ಗಮನಕ್ಕೆ ತೆಗೆದುಕೊಳ್ಳುವ ಬದಲು ನಂಬಿಕೆಗೆ ಒತ್ತು ನೀಡಿದೆ ಎಂದು ಮುಲಾಯಂ ಹೇಳಿದ್ದರು.
ಕೋರ್ಟ್ ತೀರ್ಪಿನಿಂದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಹಾದಿ ಸುಗಮಗೊಂಡಿದೆ ಎಂದು ಹೇಳಿದ್ದ ಆರೆಸ್ಸೆಸ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಎಲ್ಜೆಪಿ, ಇದು ದುರದೃಷ್ಟಕರ ಎಂದಿತ್ತು.
ಪ್ರಕರಣವು ಸುಪ್ರೀಂ ಕೋರ್ಟಿಗೆ ಹೋಗಲಿದೆ. ಹೈಕೋರ್ಟ್ ನೀಡಿರುವ ತೀರ್ಪನ್ನು ಯಾರೊಬ್ಬರೂ ಗೆಲುವು ಅಥವಾ ಸೋಲೆಂದು ಪರಿಗಣಿಸಲಾಗದು ಎಂದು ಪಾಸ್ವಾನ್ ಹೇಳಿದ್ದರು.