ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿದ್ಯಾರ್ಥಿ ಆತ್ಮಹತ್ಯೆ; ಚರ್ಚ್ ಶಾಲೆಯ ಪ್ರಾಂಶುಪಾಲ ಜೈಲಿಗೆ (Sunirmal Chakraborty | La Martiniere for Boys | Rouvanjit Rawla)
Bookmark and Share Feedback Print
 
ಕೊಲ್ಕತ್ತಾದ 'ಲಾ ಮಾರ್ಟಿನೈರ್' ಚರ್ಚ್ ಶಾಲೆಯಲ್ಲಿ ಓದುತ್ತಿದ್ದ ರಾವಣ್‌ಜಿತ್ ರಾವ್ಲಾ ಎಂಬ 13ರ ಬಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ತಿಂಗಳ ನಂತರ ಕೊನೆಗೂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಶಾಲೆಯ ಪ್ರಾಂಶುಪಾಲರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.

ಪ್ರಾಂಶುಪಾಲರ ಮೇಲೆ ಗಂಭೀರ ದೈಹಿಕ ಹಲ್ಲೆ ಪ್ರಕರಣ ದಾಖಲಿಸಿದ್ದರೆ, ಇತರ ಮೂವರು ಶಿಕ್ಷಕರ ಮೇಲೆ ಕ್ರಿಮಿನಲ್ ಹಲ್ಲೆ ಮುಂತಾದ ದಾವೆಗಳನ್ನು ಹೂಡಲಾಗಿದೆ. ಪ್ರಾಂಶುಪಾಲರು ಅಥವಾ ಶಿಕ್ಷಕರು ಬಾಲಕನ ಸಾವಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಕುರಿತು ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
PR

ಇದೇ ವರ್ಷದ ಫೆಬ್ರವರಿಯಲ್ಲಿ ರಾವಣ್‌ಜಿತ್ ರಾವ್ಲಾ ಎಂಬ ಶಾಲಾ ಬಾಲಕ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಕಾರಣ ಪ್ರಾಂಶುಪಾಲ ಸುನಿರ್ಮಲ್ ಚಕ್ರವರ್ತಿ ಮತ್ತು ಶಿಕ್ಷಕರು ದೈಹಿಕ ಹಿಂಸೆ ನೀಡಿದ್ದು. ಅದರಿಂದಲೇ ನೊಂದು ರಾವ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆರೋಪಿಸಲಾಗಿತ್ತು.

ಚಕ್ರವರ್ತಿ ಹೊರತುಪಡಿಸಿ ಶಿಕ್ಷಕರಾದ ಲಿಯೋನೆಲ್ ಗನ್ನಿಯನ್, ಪಾರ್ಥ ದತ್ತ ಮತ್ತು ಡೇವಿಡ್ ರಾಯನ್ ಎಂಬವರು ಕೂಡ ತನ್ನ ಮಗ ರಾವ್ಲಾ ಸಾವಿಗೆ ಕಾರಣರು ಎಂದು ಬಾಲಕನ ತಂದೆ ಅಜಯ್ ರಾವ್ಲಾ ಆರೋಪಿಸಿದ್ದರು.

ಇದೀಗ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣ ಮುಚ್ಚಿ ಹೋಗದೇ ಇರುವುದಕ್ಕೆ ನಾನು ದೇವರಿಗೆ ಧನ್ಯನಾಗಿದ್ದೇನೆ. ನನ್ನ ಮಗನನ್ನು ಕೆಟ್ಟದಾಗಿ ನಡೆಸಿಕೊಂಡವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಕೊಡಲೇ ಬೇಕು ಎಂದಿದ್ದಾರೆ.

ನಾಲ್ಕು ದಿನಗಳ ನಂತರ ಆತ್ಮಹತ್ಯೆ...
ರಾವಣ್‌ಜಿತ್ ರಾವ್ಲಾ ಮತ್ತು ಆತನ ಇನ್ನಿಬ್ಬರು ಸ್ನೇಹಿತರು ಶಾಲೆಯ ಶೌಚಾಲಯದಲ್ಲಿ ಅಡಗಿಕೊಂಡು, ತಾವು ತಮ್ಮ ಶಿಕ್ಷಕರಿಗೆ ಏನೋ ಹಸ್ತಾಂತರಿಸುವುದಿದೆ ಎಂದಿದ್ದರು ಎನ್ನುವುದು ಆರೋಪ. ಅದೇ ಕಾರಣದಿಂದ ಅವರು ತರಗತಿಗಳಿಗೆ ಹಾಜರಾಗಿರಲಿಲ್ಲ.

ತರಗತಿಗೆ ಗೈರು ಹಾಜರಾಗಿದ್ದ ಎಂಬ ಕಾರಣ ನೀಡಿದ ಶಾಲೆಯ ಪ್ರಾಂಶುಪಾಲ ಸುನಿರ್ಮಲ್ ಚಕ್ರವರ್ತಿ, ಫೆಬ್ರವರಿ 8ರಂದು ಬೆತ್ತ ತೆಗೆದುಕೊಂಡು ಬಾಲಕ ರಾವ್ಲಾನಿಗೆ ಮನಬಂದಂತೆ ಥಳಿಸಿದ್ದರು.

ಆ ಬಳಿಕ ಫೆಬ್ರವರಿ 9, 10 ಮತ್ತು 11ರಂದು ಬಾಲಕ ಶಾಲೆಗೆ ಬಂದಿರಲಿಲ್ಲ. 12ರಂದು ಶಾಲೆಗೆ ಬಂದಿದ್ದ. ಅಂದು ಮತ್ತೆ ತರಗತಿಯಲ್ಲಿ ಕೀಟಲೆ ಮಾಡಿದ್ದ, ತರಗತಿಯಲ್ಲಿ ಪಟಾಕಿ ಸುಟ್ಟಿದ್ದ ಎನ್ನುವುದು ಪ್ರಾಂಶುಪಾಲರ ಆರೋಪ.

'..ನಿನಗೆ 16 ನಿಮಿಷಗಳ ಕಾಲಾವಕಾಶವನ್ನು ನೀಡುತ್ತೇನೆ.. ತರಗತಿಯಲ್ಲಿ ಪಟಾಕಿ ಸುಟ್ಟದ್ದು ಯಾರು ಎಂದು ಹೇಳು. ಅಷ್ಟು ಹೇಳಿದರೆ ನಿನ್ನನ್ನು ಬಿಟ್ಟು ಬಿಡುತ್ತೇನೆ...' ಎಂದು ಪ್ರಾಂಶುಪಾಲರು ಹೇಳಿದ್ದರು. ಉತ್ತರ ಹೇಳಲು ರಾವ್ಲಾ ವಿಫಲನಾಗಿದ್ದ. ಅದೊಂದು ವಿಚಾರ ನನ್ನಲ್ಲಿ ಈಗ ಕೇಳಬೇಡಿ, ಹೇಳುವ ಸ್ಥಿತಿಯಲ್ಲಿ ನಾನಿಲ್ಲ ಎಂದಿದ್ದ.

ಇದ್ಯಾವುದನ್ನೂ ಪರಿಗಣಿಸದ ಪ್ರಾಂಶುಪಾಲರು, ಸುಮಾರು ಎರಡು ಪೀರಿಯೆಡ್‌ಗಳಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಶಾಲೆಯ ಇತರ ಶಿಕ್ಷಕರು ಕೂಡ ಪ್ರಾಂಶುಪಾಲರ ಆದೇಶವನ್ನು ಪಾಲಿಸುತ್ತಾ, ರಾವ್ಲಾನನ್ನು ತರಗತಿಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು.

ಬಾಲಕ ರಾವ್ಲಾ ಅಳುತ್ತಲೇ ಹಲವು ಗಂಟೆ ಹೊರಗೆ ನಿಂತುಕೊಂಡಿದ್ದ. ಕೊನೆಗೂ ಆತನನ್ನು ತರಗತಿಗೆ ಸೇರಿಸಿಕೊಳ್ಳಲಾಯಿತು. ನಾಳೆ ಬರುವಾಗ ತಂದೆಯನ್ನು ಕರೆದುಕೊಂಡು ಬಾ ಎಂದು ಹೇಳಲಾಗಿತ್ತು.

ಪಾಠ ಕಲಿಯುತ್ತೇವೆ ಎಂದಿದ್ದರು...
ಆಗಿರುವ ಘಟನೆಗೆ ನಾವು ವಿಷಾದಿಸುತ್ತಿದ್ದೇವೆ. ಆದರೆ ನಾವೇನೂ ತಪ್ಪು ಮಾಡಿಲ್ಲ. ಮಗುವಿಗೆ ಸಣ್ಣ ಏಟುಗಳನ್ನಷ್ಟೇ ಕೊಟ್ಟಿದ್ದೇವೆ. ಅದರ ಉದ್ದೇಶ ಶಿಸ್ತನ್ನು ಪಾಲಿಸಬೇಕೆಂಬುದಾಗಿತ್ತು. ಖಂಡಿತಾ ಇದರಿಂದ ನಾವು ಪಾಠ ಕಲಿಯುತ್ತೇವೆ. ಇನ್ನು ಯಾವುದೇ ಮಕ್ಕಳಿಗೆ ನಾವು ಥಳಿಸುವುದಿಲ್ಲ ಎಂದು ಘಟನೆಯ ನಂತರ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದರು.

ಬಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಶಿಕ್ಷಕರ ಕಿರುಕುಳವೇ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಇದೀಗ ಮಾನವ ಹಕ್ಕುಗಳ ಆಯೋಗ, ಮಕ್ಕಳ ಹಕ್ಕುಗಳ ರಕ್ಷಣಾ ಸಂಘಟನೆಗಳು ಮತ್ತು ಪೊಲೀಸರಿಂದ ತನಿಖೆ ನಡೆದಿತ್ತು.

ಅವರು ಕೇಳಿರುವ ಕ್ಷಮೆಯಿಂದ ನನ್ನ ಮಗುವಿನ ಜೀವ ಮರಳಿ ಬರುವುದೇ? ನನಗೆ ಬೇಕಾಗಿರುವುದು ನ್ಯಾಯ. ಪ್ರಾಂಶುಪಾಲರು ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಬಾಲಕನ ತಂದೆ ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಾಂಶುಪಾಲರು, ನಾನ್ಯಾಕೆ ರಾಜೀನಾಮೆ ನೀಡಲಿ? ನಾನೊಬ್ಬ ಶಿಕ್ಷಕನೇ ಹೊರತು, ಕ್ರಿಮಿನಲ್ ಅಲ್ಲ. ನಾನು ಬಾಲಕನಿಗೆ ಹೊಡೆದಿರುವುದಕ್ಕೂ, ಆತನ ಸಾವಿಗೂ ಯಾವುದೇ ಸಂಬಂಧವಿದ್ದಂತೆ ಕಾಣಿಸುತ್ತಿಲ್ಲ ಎಂದಿದ್ದರು.

ಚರ್ಚ್ ಸಮರ್ಥಿಸಿಕೊಂಡಿತ್ತು...
ಲಾ ಮಾರ್ಟಿನೈರ್ ಶಾಲೆಯನ್ನು ನಡೆಸುತ್ತಿರುವ 'ಚರ್ಚ್ ಆಫ್ ನಾರ್ತ್ ಇಂಡಿಯಾ' (ಸಿಎನ್ಐ) ಕೂಡ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಸಮರ್ಥಿಸಿಕೊಂಡಿದ್ದು, ಥಳಿತಕ್ಕೂ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದಿತ್ತು.

ನಡೆದದ್ದು ನಡೆದು ಹೋಗಿದೆ. ದಯವಿಟ್ಟು ಬಾಲಕನ ಆತ್ಮಹತ್ಯೆಗೂ, ಆತನನ್ನು ಥಳಿಸಿದ್ದಕ್ಕೂ ಯಾವುದೇ ಸಂಬಂಧ ಕಲ್ಪಿಸಬೇಡಿ ಎಂದು ಮಾಧ್ಯಮಗಳಲ್ಲಿ ನಾವು ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸಿಎನ್ಐ ವಕ್ತಾರರು ಮನವಿ ಮಾಡಿದ್ದರು.

ಕೆಲವು ವ್ಯಕ್ತಿಗಳು ತಮ್ಮ ವೈಯಕ್ತಿಕ ದ್ವೇಷವನ್ನು ಸಾಧಿಸಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಹಾಗೆ ಮಾಡಬೇಡಿ. ನಿಮ್ಮ ವೈಯಕ್ತಿಕ ವಿಚಾರಕ್ಕೆ ಈ ಪ್ರಕರಣವನ್ನು ಸಂಬಂಧ ಕಲ್ಪಿಸಿ ಆವಾಂತರ ಸೃಷ್ಟಿಸಬೇಡಿ. ಇದರಿಂದ ಸಾವನ್ನಪ್ಪಿರುವ ಬಾಲಕನ ಕುಟುಂಬದ ವೇದನೆ ಹೆಚ್ಚಬಹುದು ಎಂದೂ ಸಿಎನ್ಐ ಬಿಷಪ್ ರೆವೆಡೆಂಟ್ ಅಶೋಕ್ ಬಿಸ್ವಾಸ್ ಕೇಳಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ