ಹಿಂದೂ ಮೂಲಭೂತವಾದಿಗಳಿಂದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರಿಗೆ ಪ್ರಾಣ ಭೀತಿಯಿತ್ತು ಎಂಬ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಜಮಾತ್ ಉಲೇಮಾ ಆಗ್ರಹಿಸಿದೆ.
ಕರ್ಕರೆಯವರ ಸಾವಿನ ಕುರಿತ ತನಿಖೆಗಳ ಬಗ್ಗೆ ಸಮಾಜದಲ್ಲಿ ಸಾಕಷ್ಟು ಅಸಮಾಧಾನಗಳಿವೆ ಎಂದು ಜಮಾತ್ ಉಲೇಮಾ ರಾಜ್ಯಾಧ್ಯಕ್ಷ ಹಾಜಿ ಮೊಹಮ್ಮದ್ ಹರೂನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರಾಗಿರುವ ದಿಗ್ವಿಜಯ್ ಓರ್ವ ಜವಾಬ್ದಾರಿಯುತ ರಾಜಕಾರಣಿ. ಕರ್ಕರೆಯವರಿಗೆ ಬೆದರಿಕೆಗಳಿದ್ದವು ಎಂಬ ಅವರ ಹೇಳಿಕೆಯನ್ನು ಗಾಳಿಯಲ್ಲಿ ತೇಲಿಸಿ ಬಿಡುವ ಮೂಲಕ ಅಥವಾ ಇದು ಹುತಾತ್ಮರಿಗೆ ಮಾಡುತ್ತಿರುವ ಅಪಮಾನ ಎಂದು ಪರಿಗಣಿಸುವ ಬದಲು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ ಎಂದು ಹರೂನ್ ಒತ್ತಾಯಿಸಿದರು.
ಕರ್ಕರೆಯವರ ಸಾವಿನ ಹಿಂದೆ ಹಿಂದೂ 'ಭಯೋತ್ಪಾದಕ'ರ ಕೈವಾಡವಿದೆ ಎಂದು ಆರೋಪಿಸಿದ್ದ ಎ.ಆರ್. ಅಂತುಲೆಯವರನ್ನು ಕೂಡ ಹರೂನ್ ಎಳೆದು ತಂದಿದ್ದಾರೆ. ಅಂತುಲೆಯವರಂತಹ 'ಜಾತ್ಯತೀತ' ನಾಯಕರು ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರೂ, ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ದಿಗ್ವಿಜಯ್ ಹೇಳಿಕೆಯಿಂದಾಗಿ ಕರ್ಕರೆಯವರ ತ್ಯಾಗ ಕಿಂಚಿತ್ತೂ ಕಡಿಮೆಯೆನಿಸದು. ಈ ಕುರಿತು ತನಿಖೆ ನಡೆಸುವುದರಿಂದ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರ ಸಾವಿನ ಹಿಂದೆ ಇರುವ ಅನೈತಿಕ ಶಕ್ತಿಗಳು ಯಾವುದು ಎಂಬುದನ್ನು ಪತ್ತೆ ಹಚ್ಚಲು ಸಹಾಯವಾಗಬಹುದು ಎಂದರು.
ಮುಂಬೈ ದಾಳಿ ನಡೆಯುವ ಎರಡು ಗಂಟೆ ಮೊದಲು ನನಗೆ ಕರೆ ಮಾಡಿದ್ದ ಕರ್ಕರೆಯವರು, ಹಿಂದೂ ಮೂಲಭೂತವಾದಿಗಳಿಂದ ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದರು ಎಂದು ಕೆಲ ದಿನಗಳ ಹಿಂದಷ್ಟೇ ದಿಗ್ವಿಜಯ್ ಹೇಳಿದ್ದರು. ಆದರೆ ಈ ಬಗ್ಗೆ ತನ್ನಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ನಂತರ ಕೈ ಚೆಲ್ಲಿದ್ದರು.