ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಳ್ಳು ಹೇಳಿದ ಚಿದಂಬರಂ ರಾಜೀನಾಮೆ ನೀಡಲಿ: ಬಿಜೆಪಿ (CVC | PJ Thomas | Supreme Court | UPA | CVC Appointment | Palmolein Import Scam)
ಭ್ರಷ್ಟಾಚಾರ ಕಳಂಕಿತ ಪಿ.ಜೆ.ಥಾಮಸ್ ಅವರನ್ನು ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ಕೇಂದ್ರ ಜಾಗೃತ ದಳ (ಸಿವಿಸಿ)ಗೆ ಮುಖ್ಯಸ್ಥರಾಗಿ ಆಯ್ಕೆ ಮಾಡಿರುವುದನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟು ಆದೇಶ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ಬಿಜೆಪಿ, ಈ ತೀರ್ಪು ಭ್ರಷ್ಟಾಚಾರ ವಿರುದ್ಧದ ಐತಿಹಾಸಿಕ ವಿಜಯವಾಗಿದ್ದು, ಗೃಹ ಸಚಿವ ಪಿ.ಚಿದಂಬರಂ ಅವರು ನೈತಿಕ ಹೊಣೆ ಹೊತ್ತು ಪದತ್ಯಾಗ ಮಾಡಬೇಕು ಎಂದು ಆಗ್ರಹಿಸಿದೆ.

ಜವಾಬ್ದಾರಿಯುತ ಗೃಹ ಸಚಿವರಾಗಿ ಅವರು ಸುಪ್ರೀಂ ಕೋರ್ಟಿಗೆ ಸತ್ಯಾಂಶದಿಂದ ಕೂಡಿದ ಮಾಹಿತಿ ನೀಡಬೇಕಿತ್ತು. ಆದರೆ ಅವರು ಸತ್ಯ ಮುಚ್ಚಿಟ್ಟರು ಎಂದು ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಗುರುವಾರ ಆಗ್ರಹಿಸಿದರು.

ಪ್ರಧಾನಿ, ಸೋನಿಯಾಗೆ ಹೊಡೆತ
ಈ ತೀರ್ಪು ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಸರಕಾರ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬಲುದೊಡ್ಡ ಹೊಡೆತ ಎಂದು ಕೂಡ ಬಿಜೆಪಿ ನಾಯಕರು ಬಣ್ಣಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಡಿ, ಕಳಂಕಿತರನ್ನು ಕಿತ್ತು ಹಾಕಲು ಕೊನೆಗೂ ಸುಪ್ರೀಂ ಕೋರ್ಟ್ ಆದೇಶವನ್ನೇ ನೀಡಬೇಕಾಯಿತು. ಇದು ಬಿಜೆಪಿಯ ನಿಲುವನ್ನು ಎತ್ತಿ ಹಿಡಿದಂತಾಗಿದೆ. ನಮ್ಮ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಸಿವಿಸಿ ನೇಮಕಾತಿಯ ಸಮಿತಿಯಲ್ಲಿ ಮಾಡಿದ್ದ ವಿರೋಧಕ್ಕೆ ಕೊನೆಗೂ ಸುಪ್ರೀಂ ಕೋರ್ಟಿನಲ್ಲಿ ಜಯ ದೊರೆತಿದೆ ಎಂದರು.

ಐತಿಹಾಸಿಕ ಎಂದ ಸುಷ್ಮಾ
ಸುಪ್ರೀಂ ಕೋರ್ಟು ನಿರ್ಧಾರವು ಸಿವಿಸಿ ಎಂಬ ಸಾಂವಿಧಾನಿಕ ಹುದ್ದೆಯ ಪ್ರತಿಷ್ಠೆಯನ್ನು ಪುನಃಸ್ಥಾಪಿಸಿದೆ ಎಂದು ಹೇಳಿರುವ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಇದನ್ನು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದ್ದಾರೆ.

ಸಿವಿಸಿ ನೇಮಕಾತಿಗಾಗಿ ನಿಯಮಿಸಲಾಗಿದ್ದ ಉನ್ನತಾಧಿಕಾರ ಸಮಿತಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವ ವಹಿಸಿದ್ದರೆ, ಸುಷ್ಮಾ ಮತ್ತು ಗೃಹ ಸಚಿವ ಪಿ.ಚಿದಂಬರಂ ಸದಸ್ಯರಾಗಿದ್ದರು.

ಸಿವಿಸಿ ರಾಜೀನಾಮೆ
ಈ ಮಧ್ಯೆ, ಇದುವರೆಗೆ ನಾನೇಕೆ ಹುದ್ದೆ ಬಿಡಲಿ ಎನ್ನುತ್ತಿದ್ದ ಪಿ.ಜೆ.ಥಾಮಸ್ ಅವರು, ಕೊನೆಗೂ ಸುಪ್ರೀಂ ಕೋರ್ಟು ತೀರ್ಪಿಗೆ ತಲೆ ಬಾಗಿದ್ದು, ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಸರಕಾರವು ಸುಪ್ರೀಂ ಕೋರ್ಟ್ ಆದೇಶಕ್ಕೆ ಮನ್ನಣೆ ನೀಡಲೇಬೇಕು ಎಂದು ಒಪ್ಪಿಕೊಂಡಿದ್ದಾರೆ ಮೊಯ್ಲಿ.
ಇವನ್ನೂ ಓದಿ