ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಸಿಂಗ್ ದಾರಿ ತಪ್ಪಿಸುತ್ತಿದ್ದಾರೆ: ವಿಕಿಲೀಕ್ಸ್ ಅಸ್ಸಾಂಜೆ (Manmohan Singh | WikiLeaks | Julian Assange | India)
ಅಮೆರಿಕಾ ರಾಯಭಾರ ಕಚೇರಿಗಳ ದಾಖಲೆಗಳ ಸಾಚಾತನಕ್ಕೆ ಸವಾಲು ಹಾಕುವ ಮೂಲಕ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಭಾರತದ ನಾಯಕರು ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಿಕಿಲೀಕ್ಸ್ ಸಂಪಾದಕ ಜೂಲಿಯನ್ ಅಸ್ಸಾಂಜೆ ಆರೋಪಿಸಿದ್ದಾರೆ.

2008ರ ವಿಶ್ವಾಸ ಮತದ ಸಂದರ್ಭದಲ್ಲಿ ಕೆಲವು ಸಂಸದರಿಗೆ ಕಾಂಗ್ರೆಸ್ ಲಂಚ ನೀಡಿತ್ತು ಎಂಬುದು ಸೇರಿದಂತೆ ಹಲವು ಆರೋಪಗಳು ಸುಳ್ಳು ಎಂದು ರಾಜಕಾರಣಿಗಳು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅಸ್ಸಾಂಜೆ, ಈ ರಹಸ್ಯ ದಾಖಲೆಗಳು ಕೇವಲ ಅಮೆರಿಕಾ ರಾಯಭಾರಿಗಳ ಅಭಿಪ್ರಾಯ ಮತ್ತು ಅವುಗಳು ನಿಜವಾದುದಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.

'ಎನ್‌ಡಿಟಿವಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕಾದ ರಾಯಭಾರಿಗಳು ತಮ್ಮಿಂದ ಸಾಧ್ಯವಾಗುವಷ್ಟು ಮಾಹಿತಿಗಳನ್ನು ಸಂಗ್ರಹಿಸಿ ರವಾನಿಸುತ್ತಾರೆ. ಯಾವುದು ನಿಜ ಎಂಬುದನ್ನು ಅವರು ಅಮೆರಿಕಾಕ್ಕೆ ತಿಳಿಸುತ್ತಾರೆ. ತಮ್ಮ ಅಭಿಪ್ರಾಯವನ್ನು ಕೂಡ ನಮೂದಿಸುತ್ತಾರೆ. ಇವೆರಡೂ ಕೂಡ ಪ್ರಮುಖ ಎಂದು ಅಭಿಪ್ರಾಯಪಟ್ಟರು.

ಭಾರೀ ಚರ್ಚೆಗೆ ಕಾರಣವಾಗಿರುವ ಭಾರತದ ಲಂಚ ಪ್ರಕರಣ ಕುರಿತು ಹೇಳುವುದಾದರೆ, ಯಾವುದೇ ಅಮೆರಿಕಾ ರಾಯಭಾರಿ ವಾಷಿಂಗ್ಟನ್‌ಗೆ ಯಾವ ಕಾರಣಕ್ಕಾಗಿ ಸುಳ್ಳು ಹೇಳುತ್ತಾನೆ ಎಂಬುದು ಮಹತ್ವದ ಪ್ರಶ್ನೆಯಾಗುತ್ತದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ವಿಶ್ವದ ಯಾವುದೇ ಸರಕಾರಕ್ಕೆ ಈ ಮಾಹಿತಿ ಸ್ವೀಕಾರಾರ್ಹವಲ್ಲ, ಅದು ನಿಜವಲ್ಲ, ಪರಿಶೀಲನೆಗೊಳಪಟ್ಟಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ವಿಶ್ವಾಸ ಮತದ ಸಂದರ್ಭದಲ್ಲಿ ಕಾಂಗ್ರೆಸ್ ಇತರ ಸಂಸದರಿಗೆ ಲಂಚ ನೀಡಿದೆ ಎಂಬ ಆರೋಪವನ್ನು ಸರಕಾರ ಮತ್ತು ಕಾಂಗ್ರೆಸ್ ನಾಯಕರು ತಳ್ಳಿ ಹಾಕಿರುವುದನ್ನು ಕೂಡ ಅಸ್ಸಾಂಜೆ ವಿಶ್ಲೇಷಣೆ ನಡೆಸಿದ್ದಾರೆ.

ಹಾಗೊಂದು ವೇಳೆ ಈ ದಾಖಲೆ ನಿಜವಲ್ಲದೇ ಹೋಗಿದ್ದರೆ, ಭಾರತದಲ್ಲಿನ ಅಮೆರಿಕಾ ರಾಯಭಾರಿಗಳು ಇದಕ್ಕೆ ಸ್ಪಷ್ಟನೆ ನೀಡುತ್ತಿದ್ದರು. ಭಾರತದ ಸಂಸತ್ತು ಮತ್ತು ಹಿರಿಯ ರಾಜಕಾರಣಿಗಳ ಬಗ್ಗೆ ಅವರು ಅಮೆರಿಕಾಕ್ಕೆ ಕಳುಹಿಸುವ ವರದಿಯ ಕುರಿತು ಶಂಕೆಗಳು ಏಳುತ್ತಿದ್ದವು. ಹಾಗಾದಲ್ಲಿ ಅದು ರಾಯಭಾರಿಗಳ ಮೇಲೆ ಅಮೆರಿಕಾಕ್ಕೆ ಶಂಕೆಗೆ ಕಾರಣವಾಗುತ್ತಿತ್ತು ಎಂದರು.

ಮೊದಲು ವಿಕಿಲೀಕ್ಸ್ ದಾಖಲೆಗಳು ಸುಳ್ಳು ಎಂದರು. ಆರೋಪಗಳನ್ನು ಯಾವುದೇ ಸರಕಾರಗಳು ಒಪ್ಪಿಕೊಂಡಿಲ್ಲ, ಅದು ನಂಬಲು ಅರ್ಹವಲ್ಲ ಎಂದರು. ಇದು ತಪ್ಪಿತಸ್ಥನೊಬ್ಬನ ವಾಸ್ತವ ನಡವಳಿಕೆ. ಅಮಾಯಕ ವ್ಯಕ್ತಿ ಯಾವತ್ತೂ ಈ ರೀತಿಯಾಗಿ ವರ್ತಿಸುವುದಿಲ್ಲ ಎಂದು ಭಾರತೀಯ ರಾಜಕಾರಣಿಗಳ ನಡೆಯನ್ನು ಅಸ್ಸಾಂಜೆ ಕುಟುಕಿದರು.

ಹಾಗೆಂದು ಪ್ರಧಾನಿ ಮನಮೋಹನ್ ಸಿಂಗ್ ನಿರ್ದಿಷ್ಟ ತಪ್ಪೊಂದರ ಅಪರಾಧಿ ಎಂದು ಹೇಳಲಾಗದು. ಗಂಭೀರ ಆಪಾದನೆಯೊಂದು ಬಂದಾಗ ಭಾರತದ ಸಂಸದೀಯರು ಮತ್ತು ರಾಜಕಾರಣಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ವಾಸ್ತವವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಬದಲು ಅವರು ಪರೋಕ್ಷವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಸಾರ್ವಜನಿಕರಿಗೆ ನಿಜ ವಿಚಾರ ತಿಳಿಯದಂತೆ ಮುಚ್ಚಿ ಹಾಕಲು ಯತ್ನಿಸುತ್ತಾರೆ ಎಂದು ಆರೋಪಿಸಿದರು.
ಇವನ್ನೂ ಓದಿ