ಬೊಬ್ಬಿಲಿ (ವಿಜಯನಗರಂ), ಶನಿವಾರ, 9 ಏಪ್ರಿಲ್ 2011( 17:27 IST )
ಆಂಧ್ರ ಪ್ರದೇಶದ ಮುಂಗೋಪಿ ಕರಕುಳ ಮತ್ತು ಜವಳಿ ಖಾತೆ ಸಚಿವ ಪಿ.ಶಂಕರ್ ರಾವ್ ಮತ್ತೆ ತಮ್ಮ ಬುದ್ಧಿ ತೋರಿಸಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದಾಗ ರಿಂಗ್ ಆದ ತನ್ನ ಮೊಬೈಲ್ ಫೋನ್ ಕರೆಗೆ ಉತ್ತರಿಸದೇ ಹೋದ ಆಪ್ತ ಸಹಾಯಕನಿಗೆ ಬಹಿರಂಗವಾಗಿಯೇ ಗೂಸಾ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರು, ಮಾಧ್ಯಮದ ಮಂದಿ, ಸುಜಯ್ ಕೃಷ್ಣ ರಂಗರಾವ್ ಮತ್ತು ಇತರ ಅಧಿಕಾರಿಗಳು ನೋಡ ನೋಡುತ್ತಿದ್ದಂತೆಯೇ ತಾಳ್ಮೆ ಕಳೆದುಕೊಂಡ ಕಾಂಗ್ರೆಸ್ ಸಚಿವರು, ಆಪ್ತ ಸಹಾಯಕ ವೆಂಕಟೇಶ್ವರ ರಾವ್ ಎಂಬವರ ಮುಸುಡಿಗೆ ಬಾರಿಸಿಯೇ ಬಿಟ್ಟರು.
ಆದದ್ದಿಷ್ಟೇ. ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಅವರ ಮೊಬೈಲ್ ರಿಂಗ್ ಆಗಿತ್ತು. ತುಂಬಾ ಹೊತ್ತು ರಿಂಗ್ ಆಗುತ್ತಿದ್ದರೂ ಅವರ ಆಪ್ತ ಸಹಾಯಕರು ಕರೆ ಸ್ವೀಕರಿಸಲೇ ಇಲ್ಲ. ಇದು ಅವರ ಆಕ್ರೋಶಕ್ಕೆ ಕಾರಣವಾಗಿ, ಬಾಯಿಗೆ ಬಂದಂತೆ ಬೈದಾಡಿದರಲ್ಲದೆ, ಏಟನ್ನೂ ಕೊಟ್ಟರು.