ಪವಾಡ ಪುರುಷ, ನಡೆದಾಡುವ ದೇವಮಾನವ, ಸತ್ಯ ಸಾಯಿಬಾಬಾ ಅವರ ನಿಧನದಿಂದ ಜಗತ್ತಿಗೆ ತುಂಬಲಾಗದ ನಷ್ಟವಾಗಿದೆ. ಸಾಯಿಬಾಬಾ ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೋಕ ವ್ಯಕ್ತಪಡಿಸಿದ್ದಾರೆ.
ಪವಾಡಪುರುಷ ಸತ್ಯಸಾಯಿಬಾಬಾ ಅವರ ನಿಧನಕ್ಕೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಮತ್ತು ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಸಂತಾಪ ಸೂಚಿಸಿದ್ದಾರೆ.
ಕಡಪಾ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರದಲ್ಲಿದ್ದ ವಿರೋಧ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು, ಪುಟ್ಟಪರ್ತಿಗೆ ಧಾವಿಸಿದ್ದು ಬಾಬಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷ ಕೆ.ಚಿರಂಜೀವಿ, ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಕೂಡಾ ಬಾಬಾ ಅವರ ನಿಧನದಿಂದ ರಾಜ್ಯ ಬಡವಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಕೇಂದ್ರ ಸಚಿವರುಗಳಾದ ವಿಲಾಸರಾವ್ ದೇಶಮುಖ್ ಮತ್ತು ಸುಶೀಲ್ ಕುಮಾರ್ ಬಾಬಾ ನಿಧನಕ್ಕೆ ಸಂತಾಪ ಸೂಚಿಸಿ, ಇಂದು ಈಡೀ ವಿಶ್ವಕ್ಕೆ ಶೋಕದ ದಿನವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಗಣ್ಯಾತಿಗಣ್ಯರು ಬಾಬಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.