ಭಗವಾನ್ ಶ್ರೀ ಸತ್ಯ ಸಾಯಿಬಾಬಾ ಇಹಲೋಕ ತ್ಯಜಿಸಿದ ನಂತರ, ಲಕ್ಷಾಂತರ ಭಕ್ತರಿಂದ ಸಾಮಾಜಿಕ ಸೇವೆಗಳಿಗಾಗಿ ದೇಣಿಗೆಯಾಗಿ ಬಂದ 40 ಸಾವಿರ ಕೋಟಿ ರೂಪಾಯಿಗಳ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವವರು ಯಾರು? ಎನ್ನುವ ಪ್ರಶ್ವೆ ಉದ್ಭವಿಸಿದೆ.
ಇಂದು ಇಹಲೋಕ ತ್ಯಜಿಸಿದ 86 ವರ್ಷ ವಯಸ್ಸಿನ ಸತ್ಯ ಸಾಯಿಬಾಬಾ, ತಮ್ಮ ಉತ್ತರಾಧಿಕಾರಿಯ ಹೆಸರನ್ನು ಘೋಷಿಸದಿರುವುದು ಹೊಸತೊಂದು ಬಿಕ್ಕಟ್ಟಿಗೆ ಕಾರಣವಾಗಿದೆ.
ದೇವಮಾನವ ಸತ್ಯ ಸಾಯಿಬಾಬಾ 1972ರ ಅವಧಿಯಲ್ಲಿ ಸಾಯಿ ಸೆಂಟ್ರಲ್ ಟ್ರಸ್ಟ್ ಸ್ಥಾಪಿಸಿದರು. ಶಾಲಾ ಕಾಲೇಜುಗಳು, ಉಚಿತ ಆಸ್ಪತ್ರೆ, ಸಾಂಸ್ಕ್ರತಿಕ ಕೇಂದ್ರಗಳು ಮನತ್ತು ಗ್ರಾಮೀಣಾಭಿವೃದ್ಧಿ ಕಾರ್ಯಗಳು ವಿಶ್ವದ 165 ರಾಷ್ಟ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, 30 ಮಿಲಿಯನ್ ಭಕ್ತರು ದೇಣಿಗೆಯನ್ನು ನೀಡುತ್ತಾರೆ ಎಂದು ಅಂದಾಜಿಸಲಾಗಿದೆ.
ಪುಟ್ಟಪರ್ತಿ, ಹೈದ್ರಾಬಾದ್, ಬೆಂಗಳೂರು, ಚೆನ್ನೈ , ಕೋಡೈಕೆನಾಲ್ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ.ಟ್ರರ್ಸ್ಟ್ ದೇಣಿಗೆದಾರರಿಂದ ಕೇವಲ ಚೆಕ್ ಮತ್ತು ನಗದು ಹಣವನ್ನು ಪಡೆಯುತ್ತದೆ. ಆದರೆ, ಇಲ್ಲಿಯವರೆಗೆ ಸಂಗ್ರಹಿಸಲಾದ ಮೊತ್ತದ ವಿವರಗಳು ರಹಸ್ಯವಾಗಿ ಉಳಿದಿವೆ.
ಒಂದು ಅಂದಾಜಿನ ಪ್ರಕಾರ, ಟ್ರಸ್ಟ್ನ ಒಟ್ಟು ಆಸ್ತಿ 40 ಸಾವಿರ ಕೋಟಿ ರೂಪಾಯಿಗಳಾಗಿದ್ದು, ವಿಶ್ವದಾದ್ಯಂತ 1.5 ಲಕ್ಷ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.