ಕಾಸರಗೋಡು ಜಿಲ್ಲೆಯ ಗ್ರಾಮಗಳಲ್ಲಿ ಎದುರಾದ ಆರೋಗ್ಯ ಸಮಸ್ಯೆಗಳಿಗೆ ಎಂಡೋಸಲ್ಫಾನ್ ಕಾರಣವಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯ ಸುಪ್ರೀಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿರುವುದು ಕೇರಳ ರಾಜ್ಯದ ಜನತೆಗೆ ಆಘಾತ ಮೂಡಿಸಿದೆ.
ಒಂದು ಕಾಲದಲ್ಲಿ ಹಸಿರು ಪ್ರಕೃತಿಗೆ ಹೆಸರುವಾಸಿಯಾಗಿದ್ದ ಕಾಸರಗೋಡು, ಇಂದು ರೋಗರುಜಿನಗಳ ತಾಣವಾಗಿದೆ. ಎಂಡೋಸಲ್ಫಾನ್ ನಿಷೇಧಿಸಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇದೀಗ ರಾಜ್ಯ ಸರಕಾರ ಎಂಡೋಸಲ್ಫಾನ್ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಎಂಡೋಸಲ್ಫಾನ್ ಸೂಕ್ತ ಬಳಕೆಯಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ತೋಟಗಳಲ್ಲಿ ಆಗಸದ ಮೂಲಕ ಸಿಂಪಿಡಿಸಿರುವುದರಿಂದ ರೋಗಗಳು ಹರಡಿರುವ ಸಾಧ್ಯತೆಗಳಿವೆ ಎಂದು ಕೃಷಿ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಎಂಡೋಸಲ್ಫಾನ್ ನಿಷೇಧಿಸಿದ ದೇಶಗಳಲ್ಲಿ ಕೃಷಿ ಇಳುವರಿ ಇಳಿಕೆಯಾಗಿದೆ. ಆದ್ದರಿಂದ, ಕೇಂದ್ರ ಸರಕಾರ ಎಂಡೋಸಲ್ಫಾನ್ ನಿಷೇಧಿಸಲು ಬಯಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಎಂಡೋಸಲ್ಫಾನ್ಗೆ ಕ್ಲೀನ್ ಚಿಟ್ ನೀಡಿದೆ ಎಂದು ಹೇಳಿದ್ದಾರೆ.
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಎಸ್.ಅಚ್ಯುತಾನಂದನ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ವಿ.ಎಂ.ಸುಧೀರನ್, ಕೇಂದ್ರದ ನಿರ್ಧಾರವನ್ನು ಕಟುವಾಗಿ ಟೀಕಿಸಿ, ದೈತ್ಯ ಕಂಪೆನಿಗಳ ಓಲೈಸುವ ತಂತ್ರವಾಗಿದೆ ಎಂದು ಕಿಡಿಕಾರಿದ್ದಾರೆ.