ಯೋಗ ಗುರು ಬಾಬಾ ರಾಮದೇವ್ ಪ್ರಧಾನಿಯವರಿಗೆ ಪತ್ರ ಬರೆದು, ಕಳೆದ ಜೂನ್ 4 ರಂದು ರಾಮಲೀಲಾ ಮೈದಾನದಲ್ಲಿ ತಮ್ಮ ಬೆಂಬಲಿಗರು ವಿರುದ್ಧ ನಡೆಸಿದ ಪೊಲೀಸ್ ದೌರ್ಜನ್ಯವನ್ನು, ಅಣ್ಣಾ ಹಜಾರೆ ತಂಡದ ವಿರುದ್ಧ ಪುನರಾವರ್ತಿಸುವುದು ಬೇಡ ಎಂದು ಒತ್ತಾಯಿಸಿದ್ದಾರೆ.
ಸಶಕ್ತ ಲೋಕಪಾಲ ಮಸೂದೆಗಾಗಿ ಆಮರಣ ನಿರಶನ ಆರಂಭಿಸುವುದಕ್ಕೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಹಜಾರೆ ಮತ್ತು ಸರಕಾರ ಮಧ್ಯೆ ತೀವ್ರ ತೆರನಾದ ಘರ್ಷಣೆ ಉದ್ಭವಿಸಿದೆ. ಅಹಿಂಸಾ ಮಾರ್ಗದ ಸತ್ಯಾಗ್ರಹಗಳನ್ನು ಅಸಂವಿಧಾನಿಕವಾಗಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿ ತಡೆಯುವುದು ಸೂಕ್ತವಲ್ಲ ಎಂದು ಬಾಬಾ ರಾಮದೇವ್ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಕಳೆದ ಜೂನ್ 4 ರಂದು ರಾಮಲೀಲಾ ಮೈದಾನದಲ್ಲಿ ಮಧ್ಯರಾತ್ರಿ ತಮ್ಮ ಬೆಂಬಲಿಗರ ವಿರುದ್ಧ ನಡೆಸಿದ ಪೊಲೀಸ್ ದೌರ್ಜನ್ಯ, ಹಜಾರೆ ತಂಡದ ಮೇಲೆ ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೀರಿ ಎನ್ನುವ ನಿರೀಕ್ಷೆಗಳಿವೆ ಎಂದು ಪ್ರಧಾನಿ ಸಿಂಗ್ ಅವರಿಗೆ ಬಾಬಾ ರಾಮದೇವ್ ಕೋರಿದ್ದಾರೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸ್ವಾತಂತ್ಯ ದಿನಾಚರಣೆಯ ಅಂಗವಾಗಿ ಕೆಂಪುಕೋಟೆಯಲ್ಲಿ ಮಾತನಾಡಿ, ಆಮರಣ ನಿರಶನಗಳಿಂದ ಭ್ರಷ್ಟಾಚಾರ ಅಂತ್ಯಗೊಳಿಸಲು ಸಾಧ್ಯವಿಲ್ಲ. ಸಂಸತ್ತಿನಿಂದ ಮಾತ್ರ ಭ್ರಷ್ಟಾಚಾರ ಸಮಸ್ಯೆಯನ್ನು ಅಂತ್ಯಗೊಳಿಸಲು ಸಾಧ್ಯ ಎಂದು ಹೇಳಿಕೆ ನೀಡಿದ ನಂತರ ದೆಹಲಿ ಪೊಲೀಸರು, ಹಜಾರೆ ನಿರಶನಕ್ಕೆ ಅನುಮತಿಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.