ಇಲ್ಲಿನ ಒನಕೆ ಓಬವ್ವ ವೇದಿಕೆಯಲ್ಲಿ ಬುಧವಾರ ಸಂಜೆ 75ನೇ ಕನ್ನಡ ಸಾಹಿತ್ಯ ತೇರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೀಪಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.ನಾಲ್ಕು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ,ಸಮ್ಮೇಳನವನ್ನು ಉದ್ದೇಶಿಸಿ ಉದ್ಘಾಟನಾ ಭಾಷಣ ಮಾಡಿದ ಅವರು, ಕನ್ನಡ ಭಾಷೆಗೆ ಹೆಚ್ಚಿನ ನೆರವು ನಿಟ್ಟಿನಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದ್ದು, ವಿಕಿಪಿಡಿಯ ಮಾದರಿಯಲ್ಲಿ ಕನ್ನಡ ಅಂತರ್ಜಾಲ ತಾಣವನ್ನು ಶೀಘ್ರವೇ ರೂಪಿಸಲಾಗುವುದು, ಅಲ್ಲದೇ ಕನ್ನಡ ತಂತ್ರಾಂಶ ಅಭಿವೃದ್ದಿಗೂ ನೆರವು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.ಹಾಗೆ ಗಡಿನಾಡ ಅಭಿವೃದ್ದಿಗಾಗಿ ಪ್ರಾಧಿಕಾರಕ್ಕೆ ನೆರವು, ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಮುಂದಿಟ್ಟ 10ಬೇಡಿಕೆಗಳನ್ನು ಈಡೇರಿಸುವುದಾಗಿಯೂ ಹೇಳಿದರು.ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಹೊರನಾಡಿನ ಮತ್ತು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪೀಠ ಸ್ಥಾಪನೆ, ನಾಡಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಕನ್ನಡ ಪೀಠಗಳ ಬಲವರ್ಧನೆ, ಐಎಎಸ್,ಐಪಿಎಸ್ ಸೇರಿದಂತೆ ಅಖಿಲ ಭಾರತ ಮಟ್ಟದ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದು, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕನ್ನಡ ಕೋರ್ಸ್ ಪ್ರಾರಂಭ ಯೋಜನೆಗಳಿಗಾಗಿ ಬಜೆಟ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒದಗಿಸಿದ್ದ ಅನುದಾನದ ಜೊತೆಗೆ ಹೆಚ್ಚುವರಿಯಾಗಿ 25ಕೋಟಿ ರೂ.ವೆಚ್ಚ ಮಾಡಲಾಗುವುದು ಎಂದರು.ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿಗೆ ತಲಾ 2ಕೋಟಿ ರೂ.ಗಳಂತೆ 18ಕೋಟಿ ರೂ.ಗಳ ಅನುದಾನ ಒದಗಿಸಲು ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಕನ್ನಡದಲ್ಲಿ ಐಪಿಎಸ್, ಐಎಎಸ್ ಮತ್ತು ಐಎಫ್ಎಸ್ ಪರೀಕ್ಷೆ ತೇರ್ಗಡೆಯಾದವರಿಗೆ 1ಲಕ್ಷ ರೂ. ನಗದು ಬಹುಮಾನ ಮತ್ತು ಕೇಂದ್ರದ ಇತರ ನಾಗರಿಕ ಸೇವೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಲಾ 50ಸಾವಿರ ರೂ.ಗಳ ನಗದು ಬಹುಮಾನ ಸರ್ಕಾರ ನೀಡಲಿದೆ ಎಂದು ಯಡಿಯೂರಪ್ಪ ತಿಳಿಸಿದರು.ಕನ್ನಡ ಸಾಹಿತ್ಯ ಜಾತ್ರೆಗೆ ಮುಖ್ಯಮಂತ್ರಿಗಳು ಅಧಿಕೃತವಾಗಿ ಚಾಲನೆ ನೀಡಿದ ನಂತರ, ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಲಾಯಿತು. ಸಚಿವ ಕರುಣಾಕರ ರೆಡ್ಡಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಚಿತ್ರದುರ್ಗ ಬೃಹನ್ಮಠದ ಮುರುಘಾರಾಜೇಂದ್ರ ಶರಣರು, ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ, ಸಚಿವರಾದ ಕರುಣಾಕರ ರೆಡ್ಡಿ, ಡಿ.ಸುಧಾಕರ್, ಗೂಳಿಹಟ್ಟಿ ಶೇಖರ್, ಎಲ್.ಎಲ್.ಶೇಷಗಿರಿ ರಾವ್, ಸಿದ್ದಲಿಂಗಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು. |