ಸಾಹಿತ್ಯ ಎನ್ನುವುದು ಸರ್ಕಾರದಿಂದ ನಿರ್ಣಯವಾಗುವಂಥದ್ದಲ್ಲ, ಅದು ತೀರಾ ಭಾವನಾತ್ಮಕವಾದ ವಿಚಾರ ಎಂದು 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪೀಠ ವಹಿಸಿದ್ದ ಪ್ರೊ.ಎಲ್.ಬಸವರಾಜು ಅವರು ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿದ್ಯಾಭ್ಯಾಸದ ಖಾಸಗೀಕರಣ ಬೇಡ, ವಿದ್ಯಾಭ್ಯಾಸದ ರಾಷ್ಟ್ರೀಕರಣ ಮಾಡಬೇಕು ಎಂದು ಆಗ್ರಹಿಸಿದರು.ಹಲವು ಧಾರ್ಮಿಕ ವಿಚಾರಗಳಿಗೆ ಇಂದೂ ಕೂಡ ಸರ್ಕಾರ ಪ್ರವೇಶ ಮಾಡುವುದು ಹೇಗೆ ಸಾಧ್ಯವಿಲ್ಲವೋ ಹಾಗೆ, ಆದ್ದರಿಂದ ಇಂತಹ ಭಾವನಾತ್ಮಕ, ಆವೇಶ ಭರಿತ ವಿಷಯಗಳ ಗೊಡವೆಗೆ ಹೋಗದಿರುವುದು ಜನಕ್ಕೂ, ಜನಪರ ಅಭಿವೃದ್ದಿಗಾಗಿ ನಡೆಯುತ್ತಿರುವ ಸರ್ಕಾರಗಳಿಗೂ ಶೋಭೆ ತರುವಂಥದ್ದು. ಈ ಕೆಲಸ ಅಂದರೆ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ದಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ ಮತ್ತು ಸಂಸ್ಕೃತಿ ಇಲಾಖೆ ಇವನ್ನೆಲ್ಲಾ ಸರ್ಕಾರ ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳಿಗೆ ವರ್ಗಾಯಿಸುವುದು ಅಗತ್ಯ. ಈ ಸಂಸ್ಥೆಗಳನ್ನು ಎರಡು ಸ್ವಾಯತ್ತ ವಿಶ್ವವಿದ್ಯಾಲಯಗಳನ್ನಾಗಿ ಪರಿವರ್ತಿಸಲಿ. ಆಗ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ದಿಗೆ ನಿರಂತರವಾಗಿ ನಡೆಯುಂತಾಗುತ್ತದೆ. ಇದಕ್ಕೆಲ್ಲಾ ಸರ್ಕಾರಗಳು ಪ್ರೋತ್ಸಾಹ ಕೊಡದಿದ್ದರೆ ಹೇಗೆ ಎಂಬುದಾಗಿಯೂ ಪ್ರಶ್ನಿಸಿದರು.ಕನ್ನಡ ದೇಶ-ಭಾಷೆ-ಸಂಸ್ಕೃತಿ-ಸಾಹಿತ್ಯ ಎಂದು ಕೊಚ್ಚಿಕೊಳ್ಳುತ್ತಿರುವ ಈ ಜನ,ಕನ್ನಡವನ್ನು ಮಾತನಾಡುವ ನಾವೆಲ್ಲ ಒಂದು ಜನಾಂಗ; ಎಲ್ಲಾ ನಮ್ಮವರು; ನಮ್ಮಿಂದ ಎಲ್ಲರಿಗೂ ಮರ್ಯಾದೆ ಸಲ್ಲಬೇಕೆಂಬ ಪ್ರಾಥಮಿಕ ಪಾಠವನ್ನೇ ಕಲಿತಿಲ್ಲ. ಕನ್ನಡ ಮಾತನಾಡುವ ಜನರನ್ನು ಅದು, ಇದು ಎಂದು ಹೆಸರಿಟ್ಟು, ಬಹಿಷ್ಕರಿಸಿ, ಅವರನ್ನು ಊರಿಂದ ಹೊರಗಿಟ್ಟು, ಅವರಿಗೆ ಮನೆಯಿಲ್ಲದೆ ಅನ್ನವಿಲ್ಲದೆ ವಿದ್ಯೆಯಿಲ್ಲದೆ ಉದ್ಯೋಗವಿಲ್ಲದೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿಟ್ಟಿರುವ ಈ ಕನ್ನಡಿಗರೆಂಬ ನಾವು ಕನ್ನಡಾಂಬೆಗೆ ಕನ್ನಡ ಸರಸ್ವತಿಗೆ ಕನ್ನಡ ಭುವನೇಶ್ವರಿಗೆ ಅವಮಾನ ಮಾಡುತ್ತಿರುವಂತಾಗಿಲ್ಲವೇನು? ಇದು ಯಾರ ಮನಸ್ಸಿಗೂ ಬರುತ್ತಿಲ್ಲವೇನು? ತಮ್ಮಷ್ಟಕ್ಕೆ ತಾವು ಚಳಿಗಾಲದಲ್ಲಿ ಕಂಬಳಿ ಹೊದ್ದುಕೊಂಡವರಂತೆ ಬೆಚ್ಚಗೆ ಕುಳಿತಿರುವರಲ್ಲ? ಹೊಟ್ಟೆಗಿಲ್ಲದವನು ಸಾಯುತ್ತಿರುವಾಗ ಔತಣವನ್ನು ಉಂಡ ಉಂಡಾಡಿಯಂತೆ ದಲಿತರಲ್ಲದ ಜನ ನಿರಪರಾಧಿಗಳೆಂಬಂತೆ ಎಗ್ಗು ಸಿಗ್ಗಿಲ್ಲದೆ ತಿರುಗುತ್ತಿರುವುದು ಒಂದು ಸಾಮಾಜಿಕ ಅಪಹಾಸ್ಯವಾಗಿದೆ. ಇದರಿಂದ ಪಾರಾಗುವ ಇಚ್ಛೆ ಮೇಲ್ವರ್ಗದವರಿಗೆ ಇರುವುದೇ ಆದರೆ ಅವರು ಈ ಅವಮಾನಕರವಾದ ಸಂದರ್ಭದಿಂದ ಮೊದಲು ಹೊರಬರಬೇಕು. ಈ ಸಂಬಂಧವಾಗಿಯೇ ನಾವು ಮಾಡಬಹುದಾದ ಮೊಟ್ಟಮೊದಲ ಅಡಿಪಾಯದ ರೀತಿಯ ಕಾರ್ಯಭಾರವೆಂದರೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಮಕ್ಕಳಿಗೆ ಶಿಶುವಿಹಾರದಿಂದ ಮೊದಲುಗೊಂಡು ರಾಜ್ಯಾಂಗದತ್ತವಾಗಿ ಒತ್ತಾಯ ಮಾಡಿರುವ ಹತ್ತನೆಯ ತರಗತಿಯವರೆಗೆ ಉಚಿತ-ಕಡ್ಡಾಯ-ಅತ್ಯುತ್ತಮ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಮಾಡಬೇಕು. ಈ ನಿರ್ಗತಿಕ ವರ್ಗದ ತಂದೆ-ತಾಯಿಯರು ಸ್ವತಃ ವಿದ್ಯಾವಂತರಾಗಿರುವುದಿಲ್ಲವಾಗಿ ವಾಸಿಸಲು ಯೋಗ್ಯವಾದ ಮನೆಗಳೂ ಇಲ್ಲದೆ, ಶುಚಿಯಾದ ಕೇರಿಯೂ ಇರದೆ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಅವರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಯಾವುದಾದರೂ ಶಾಲೆಗೆ ಕಳಿಸುತ್ತಾರೆ ಎಂದರೆ, ಅದು ಆಗದ ಮಾತು. |