ಸಂಘರ್ಷದ ಕಾಲ ಇದಲ್ಲ, ಐದು ವರ್ಷ ಒಟ್ಟಾಗಿ ಕೆಲಸ ಮಾಡೋಣ. ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ಕೇಂದ್ರದಲ್ಲಿರುವ ರಾಜ್ಯದ ಕಾಂಗ್ರೆಸ್ ಸಚಿವರಿಗೆ ತಾವು ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಭಾರತ ವಿಚಾರ ವೇದಿಕೆಯ ಸ್ಥಾಪಿಸಿರುವ ನೂತನ ಯಾಗ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ರಾಜ್ಯದ ಕಾಂಗ್ರೆಸ್ ಮುಖಂಡರೊಂದಿಗೆ ತಾವು ಈ ಸಂಬಂಧ ಮಾತನಾಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿನ ಹಿತಾಸಕ್ತಿಯ ಸಂಬಂಧ ಪಕ್ಷ ಬೇಧ ಮರೆತು ಹೋರಾಡೋಣ ಎಂದ ಅವರು, ರಾಜ್ಯದ ಅಭಿವೃದ್ಧಿಯ ಸಂಬಂಧ ಈಗಾಗಲೇ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ ಯಡಿಯೂರಪ್ಪ, ಪ್ರಧಾನಿ ಅವರು ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಎಂದರು.
ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಒಂದು ವರ್ಷಕಾಲ ಆಡಳಿತ ನಡೆಸಿದೆ. ಇದರಲ್ಲಿ ಮೂರು ತಿಂಗಳ ಕಾಲ ಚುನಾವಣೆಯಲ್ಲಿ ಕಾಲ ಕಳೆದಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವುದಾಗಿ ಹೇಳಿದರು. |