ಕರಾವಳಿ ಪ್ರದೇಶದಲ್ಲಿ ಮತ್ತೆ ಕೋಮುದ್ವೇಷದ ನೆತ್ತರು ಹರಿದಿದ್ದು, ನಗರದ ಜೆಪ್ಪು ಕುಡುಪಾಡಿಯಲ್ಲಿ ದುಷ್ಕರ್ಮಿಗಳ ಗುಂಪೊಂದು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಾಯಾಳು ಶುಕ್ರವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅನ್ಯಕೋಮಿನ ಗುಂಪೊಂದು ಈ ಘಟನೆ ನಡೆಸಿರಬಹುದು ಎಂದು ವದಂತಿ ಹಬ್ಬಿದ ಪರಿಣಾಮ ಜೆಪ್ಪು ಪರಿಸರದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾವನ್ನ ಪ್ಪಿರುವ ಯುವಕನನ್ನು ಮೋರ್ಗನ್ಸ್ ಗೇಟ್ನ ಹಣ್ಣಿನ ಅಂಗಡಿಯ ಮಾಲೀಕ, ನೀರುಮಾರ್ಗದ ಭದ್ರಕೋಡಿ ನಿವಾಸಿ ಚೇತನ್ ಶೆಟ್ಟಿ(26) ಎಂದು ಗುರುತಿಸಲಾಗಿದೆ.
ಚೇತನ್ ಅಂಗಡಿಯಲ್ಲಿದ್ದಾಗ ಮಾರುತಿ ಓಮ್ಮಿ ಕಾರಿನಲ್ಲಿ ಆಗಮಿಸಿದ ತಂಡ ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು. ಚೇತನ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಮುಂಜಾನೆ ಚೇತನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಕಳೆದ 21ರಂದು ರಾತ್ರಿ ಮಾರ್ನಮಿಕಟ್ಟೆಯ ನಿವಾಸಿ ಮೊಹಮ್ಮದ್ ಅಶ್ರಫ್ ಮೇಲೆ ದುಷ್ಕರ್ಮಿಗಳ ಗುಂಪು ಮಾರಕಾಯುಧಗಳಿಂದ ಹಲ್ಲೆ ನಡೆಸಿತ್ತು. ಅಂದು ಹಲ್ಲೆ ನಡೆಸಿದವರು ಆಗಾಗ ಚೇತನ್ ಅಂಗಡಿ ಬಳಿ ನಿಂತು ಹರಟೆ ಹೊಡೆಯುತ್ತಿದ್ದರು, ಹೀಗಾಗಿ ಆ ಗುಂಪಿಗೂ ಚೇತನ್ಗೂ ಸಂಬಂಧ ಇರಬಹುದೆಂಬ ಕಾರಣಕ್ಕೆ, ಪ್ರತೀಕಾರವಾಗಿ ಮೊಹಮ್ಮದ್ ಅಶ್ರಫ್ ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಶ್ರಫ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |