ರಾಜ್ಯವನ್ನು ಅಭಿವೃದ್ಧಿ ಪಥದಿಂದ ದಿವಾಳಿಯತ್ತ ಕೊಂಡೊಯ್ದಿರುವುದೇ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ, ಆದರೆ, ವೈಯಕ್ತಿಕವಾಗಿ ಮುಖ್ಯಮಂತ್ರಿಗಳ ಅವರ ಸಚಿವ ಸಂಪುಟ ಸಹೋದ್ಯೋಗಿಗಳ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಆಸ್ತಿ-ಪಾಸ್ತಿಗಳು ಹೆಚ್ಚಾಗಿವೆ. ಅದನ್ನೇ ಸಾಧನೆ ಎನ್ನುವುದಾದರೆ ಸಾಧನಾ ಸಮಾವೇಶ ಮಾಡಿಕೊಳ್ಳಲು ನಮ್ಮ ಅಭ್ಯಂತರ ಇಲ್ಲ ಎಂದು ವ್ಯಂಗ್ಯವಾಡಿದರು.
ಜನಾದೇಶ ತಿರಸ್ಕರಿಸಿ ಆಪರೇಷನ್ ಕಮಲ ಮಾಡಿದ್ದು, ವರ್ಗಾವಣೆ ದಂಧೆ, ಗಡಿ ಭಾಗ ಒತ್ತುವರಿ ತಡೆ ವೈಫಲ್ಯ, ಚರ್ಚ್ ಮೇಲೆ ದಾಳಿ, ಹೆಣ್ಣು ಮಕ್ಕಳ ಮೇಲೆ ದಾಳಿ, ರೈತರ ಮೇಲೆ ಗೋಲಿಬಾರ್, ರೈತರ ಭೂಮಿ ವಶ ಇವೆಲ್ಲವೂ ಬಿಜೆಪಿ ಸರ್ಕಾರದ ಸಾಧನೆ ಎಂದು ಹೇಳಿದರು.
2008-09ನೇ ಸಾಲಿನ ಬಜೆಟ್ನಲ್ಲಿ ಸುಮಾರು 9,500ಕೋಟಿ ರೂಪಾಯಿ ಕೊರತೆ ಬಿದ್ದಿದೆ. ಈ ಕೊರತೆ ತುಂಬಿಕೊಳ್ಳುವ ಪ್ರಯತ್ನ ಮಾಡದೇ ಮಠ-ಮಾನ್ಯಗಳಿಗೆ ದುಡ್ಡು ಕೊಡುವ ಹೊಸ ಸಂಪ್ರದಾಯವನ್ನು ಮುಖ್ಯಮಂತ್ರಿಗಳು ಮುಂದುವರಿಸಿದ್ದು, ಸರ್ಕಾರವನ್ನು ದಿವಾಳಿ ಅಂಚಿಗೆ ಕೊಂಡೊಯ್ದಿದ್ದಾರೆ ಎಂದು ದೂರಿದರು. |