ಮೆಟ್ರೋ ರೈಲು ಸಂಚಾರ ಆರಂಭವಾದರೆ ಬೆಂಗಳೂರಿನಲ್ಲಿ ಸುಮಾರು ಎಂಟು ಲಕ್ಷ ವಾಹನಗಳ ಓಡಾಟ ಕಡಿಮೆಯಾಗಲಿದೆ ಎಂದು ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಮೆಟ್ರೋ ರೈಲು ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಸರ್ಕಾರದ ಪರ ನ್ಯಾಯಮೂರ್ತಿ ಶಾಂತನಗೌಡರ್ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ಮೆಟ್ರೋ ರೈಲು ಕಾರ್ಯಾರಂಭವಾದರೆಬೆಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಿ ಸಂಚಾರ ಸುಗಮವಾಗಲಿದೆ. ಮೆಟ್ರೋ ಭೂಸ್ವಾಧೀನ ಪ್ರಶ್ನಿಸಿ ಅಂಗಡಿ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಆರ್.ವಿ ರಸ್ತೆ ವ್ಯಾಪ್ತಿಯ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ಈಗಾಗಲೇ ಯೋಜನೆ ಜಾರಿಯಲ್ಲಿ ಒಂದು ವರ್ಷ ವಿಳಂಬವಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ದ್ವಿಚಕ್ರ ವಾಹನ ಸಂಚಾರದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮೆಟ್ರೋ ಯೋಜನೆಯಿಂದ ಇವುಗಳಿಗೂ ಕಡಿವಾಣ ಬೀಳಲಿದೆ ಎಂದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮೇಲ್ಸೇತುವೆ ಮೂಲಕ ಮೆಟ್ರೋ ರೈಲು ಮಾರ್ಗ ನಿರ್ಮಿಸಿದರೆ ನಗರದ ಮಧ್ಯೆ ಬರ್ಲಿನ್ ಗೋಡೆ ತರ ಕಾಣಿಸಲಿದೆ. ಮತ್ತು ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಸೂಟ್ಕೇಸ್ ಅಥವಾ ಇನ್ನಾವುದೇ ವಸ್ತುಗಳನ್ನು ಸಾಗಿಸಲು ಅವಕಾಶವಿರುವುದಿಲ್ಲ ಎಂದು ಹೇಳಿದರು. |