ಬಿಜೆಪಿ ಸಚಿವ, ಸಂಸದರು ನಡೆಸಿರುವ ವಾಗ್ದಾಳಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬುಧವಾರ ತರಾತುರಿಯ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಚುನಾವಣೆಯಲ್ಲಿ ಹಣ, ಹೆಂಡ ಹಂಚಿದೆ ಎಂಬ ಹೇಳಿಕೆಯನ್ನೇ ನೀಡಿಲ್ಲ ಎಂದು ಉಲ್ಟಾ ಹೊಡೆಯುವ ಮೂಲಕ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.
'ನಾನು ಶಿವಮೊಗ್ಗದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತನ್ನು ಮಾಧ್ಯಮಗಳೇ ತಿರುಚಿ ಬರೆದಿವೆ ಎಂದು ಆರೋಪಿಸಿರುವ ಈಶ್ವರಪ್ಪ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆಯನ್ನು ಕಾಂಗ್ರೆಸ್ನವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಧಾರ್ಮಿಕ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ತಪ್ಪು ಎಂಬ ನಿಲುವಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ಸಮಜಾಯಿಷಿಕೆ ನೀಡಿದ ಅವರು, ಚುನಾವಣೆಯಲ್ಲಿ ನೀತಿ, ಸಿದ್ದಾಂತ, ಅಭಿವೃದ್ಧಿ ಬಗ್ಗೆ ಚರ್ಚಿಸದೇ ಎಲ್ಲರೂ ಹಣ, ಹೆಂಡದ ಬಗ್ಗೆ ಚರ್ಚಿಸಿದ್ದರು ಎಂದು ಹೇಳಿದ್ದೆ. ಆ ಹೇಳಿಕೆಯನ್ನೇ ತಿರುಚಿ ಈ ರಾದ್ಧಾಂತಕ್ಕೆ ಕಾರಣ ಮಾಡಿದ್ದಾರೆ ಎಂದು ಹೇಳಿದರು. ರಾಜ್ಯಾಧ್ಯಕ್ಷರು ನಿಮಗೆ ನೋಟಿಸ್ ಕೊಡುವುದಾಗಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಇಲ್ಲ ಆ ಬಗ್ಗೆ ರಾಷ್ಟ್ರಾಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ. ನನಗೆ ನೋಟಿಸ್ ನೀಡಬಾರದು ಅಂತ ಅವರೇ ಸೂಚಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಆ ನಿಟ್ಟಿನಲ್ಲಿ ನನ್ನ ಹೇಳಿಕೆ ಬಗ್ಗೆ ಪಕ್ಷದ ವರಿಷ್ಠರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಅವರಿಗೆ ವಿವರಿಸಿದ್ದೇನೆ. ಈಗಲೂ ನಾನು ಹೇಳುತ್ತೇನೆ ಪಕ್ಷದೊಳಗೆ ಯಾವುದೇ ಭಿನ್ನಮತ ಇಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು. ಆದರೆ ನೀವು ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗುತ್ತಿದೆ ಎಂದು ದೂರಿದ್ದೀರಲ್ಲ ಎಂಬ ಪ್ರಶ್ನೆಗೆ, ಹೌದು ಆ ಮಾತನ್ನು ಹೇಳಿದ್ದೆ. ಆದರೆ ಗೊಂದಲವಾಗಿರುವುದು ಆ ಹೇಳಿಕೆಗೆ ಅಲ್ಲ, ನನ್ನ ನಿಜಾರ್ಥದ ಹೇಳಿಕೆಯನ್ನೇ ತಿರುಚಿ ಕಾಂಗ್ರೆಸ್ ಲಾಭ ಪಡೆಯಲು ಹೊರಟಿದೆ ಎಂದು ಈಶ್ವರಪ್ಪನವರು ತಾವು ಈ ಮೊದಲು ಅಂತಹ ಒಡಕಿನ ಹೇಳಿಕೆಯೇ ನೀಡಿಲ್ಲ ಎಂಬಂತೆ ಸಮರ್ಥನೆ ನೀಡಿದರು. |