ಇತ್ತೀಚೆಗೆ ವಿವಾದಕ್ಕೆ ಒಳಗಾಗಿರುವ ಬಿಬಿಎಂಪಿ ಬಾಡೂಟ ಪ್ರಕರಣದಲ್ಲಿ ಬಿಬಿಎಂಪಿ ಆಯುಕ್ತ ಡಾ.ಸುಬ್ರಮಣ್ಯ ಅವರ ಯಾವುದೇ ಕೈವಾಡ ಇಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕೇಂದ್ರೀಯ ಸಂಘ ಬುಧವಾರ ಸ್ಪಷ್ಟಪಡಿಸಿದೆ.
ಅಂದು ಬಾಡೂಟವನ್ನು ನೌಕರರ ಕೇಂದ್ರೀಯ ಸಂಘವೇ ಏರ್ಪಡಿಸಿತ್ತಾದರೂ ಸಂಘದ ಯಾರೊಬ್ಬರೊಂದಿಗೂ ಸಭೆ ನಡೆಸದೆ ಸಂಘದ ಅಧ್ಯಕ್ಷ ಆರ್. ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಶಿವಕುಮಾರ್ ಹಾಗೂ ಬಸವರಾಜ್ ಅವರು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಈ ಕಾರ್ಯಕ್ರಮ ನಿಗದಿಪಡಿಸಿದ್ದಾರೆ. ಈ ಬಗ್ಗೆ ಸಂಘದ ಇತರ ಸದಸ್ಯರಿಗೆ ಏನು ತಿಳಿದಿರಲಿಲ್ಲ ಎಂದು ಸಂಘದ ಖಜಾಂಚಿ ಚ.ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೌಕರರ ಕೇಂದ್ರೀಯ ಸಂಘದಿಂದ ಬಾಡೂಟ ಕಾರ್ಯಕ್ರಮ ಏರ್ಪಡಿಸಿ, ಕಾರ್ಯಕ್ರಮದ ಹೆಚ್ಚಿನ ಮೊತ್ತವನ್ನು ಕಂದಾಯ ಇಲಾಖೆ ಕಾರ್ಯನಿರ್ವಾಹಕ ನೌಕರರ ಸಂಘದಿಂದ ಭರಿಸಲಾಗಿದೆ. ಈ ಎರಡೂ ಸಂಘಕ್ಕೂ ಬಿ.ಆರ್.ಶಿವಕುಮಾರ್ ಅವರು ಪ್ರಧಾನ ಕಾರ್ಯದರ್ಶಿಯಾಗಿರುವುದರಿಂದ ಎರಡೂ ಸಂಘವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. |